ಹಾಸನ: ಕೃಷಿಯೆಂದರೆ ಮೂಗು ಮುರಿಯುವ, ಜಾನಪದ ಕಲೆ ಸಾಹಿತ್ಯವೆಂದರೆ ಬೇಡ ಎನ್ನುವ ಮನಸ್ಥಿತಿ ಉಳ್ಳವರಿಗೆ ಕೃಷಿ ನಮ್ಮ ಬದುಕು ಜಾನಪದ ಕಲೆ ಮತ್ತು ಸಾಹಿತ್ಯ ನಮ್ಮ ಸಂಸ್ಕೃತಿ ಎಂಬ ಸತ್ಯವನ್ನು ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ಹಾಸನ ಜಿಲ್ಲೆಯ ಅರಸೀಕೆರೆ ನಗರದ ವೆಂಕಟೇಶ್ವರ ಕಲಾಭವನದಲ್ಲಿ ಕನ್ನಡ ಸಂಘ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ರಾಗಿ ತೂರುವುದರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಸಂಕ್ರಾಂತಿ ಸಂಭ್ರಮದ ಹೆಸರಿನಲ್ಲಿ ಸಹೃದಯಿ ಕನ್ನಡ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿರುವ ಸಂಕ್ರಾಂತಿ ಸುಗ್ಗಿ ಸಂಭ್ರಮ ಅರ್ಥಪೂರ್ಣವಾಗಿದೆ. ಅಲ್ಲದೇ ಇತ್ತೀಚಿನ ದಿನದಲ್ಲಿ ಹಳ್ಳಿಯಲ್ಲಿಯೂ ಕಣಗಳು ಮರೆತು ಹೋಗುವ ಸ್ಥಿತಿ ತಲುಪಿವೆ. ಬೆಳೆದ ಫಸಲನ್ನು ರಸ್ತೆಯ ಬದಿಯಲ್ಲಿಯೋ, ಕಾಲುದಾರಿಯಲ್ಲಿಯೋ, ಅಥವಾ ಟಾರ್ಪಲ್ ಹಾಕಿ ಅಥವಾ ಫಸಲನ್ನ ಕೊಯ್ಯುವ, ಬಡಿಯುವ, ಒಕ್ಕಣೆ ಮಾಡುವ ಯಂತ್ರೋಪಕರಣಗಳನ್ನು ಬಳಸುತ್ತಿರುವುದರಿಂದ ಹಳ್ಳಿಯ ಸೊಗಡು ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸೀಮಿತವಾಗದೇ ರೈತಾಪಿ ವರ್ಗ ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳುವ ರೀತಿಯಲ್ಲಿ ಕಾರ್ಯಕ್ರಮವನ್ನು ಎರಡರಿಂದ ಮೂರು ದಿನ ಆಚರಿಸಿದರೆ ವಿಶೇಷವಾಗಿರುತ್ತದೆ. ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇರುತ್ತೆ ಎಂದು ಭರವಸೆ ನೀಡಿದರು.
ಇನ್ನು ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ನಗರಸಭೆಯ ಪೌರಾಯುಕ್ತ ಕಾಂತರಾಜ್, ಕಾರ್ಯಕ್ರಮ ಆಯೋಜಕರಾದ ಮೋಹನ್ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.