ಸಕಲೇಶಪುರ: ತಾಲ್ಲೂಕಿನಲ್ಲಿ ಮಳೆಯಬ್ಬರ ಹೆಚ್ಚಾಗಿದ್ದು, ಭಾರಿ ಗಾಳಿ ಹಾಗೂ ಮಳೆಗೆ ಹಲವು ಮನೆಗಳ ಮೇ ಲ್ಚಾವಣಿಗಳು ಹಾರಿ ಹೋಗಿವೆ. ನೂರಾರು ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ಪಟ್ಟಣದ ಚಂಪಕನಗರ ಬಡಾವಣೆಯ ಮಂಜುನಾಥ್ ಎಂಬುವರ ಮನೆಯ ಮೇಲ್ಚಾವಣಿ ಶೀಟ್ಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಹಲಸುಲಿಗೆ ಗ್ರಾಮದಲ್ಲಿ ಐದು ಮರಗಳು, ವಿದ್ಯುತ್ ಕಂಬಗಳು ಹಾಗೂ ಒಂದು ಟ್ರಾನ್ಸ್ ಫಾರ್ಮರ್ ರಸ್ತೆಗೆ ಉರುಳಿದೆ. ಕುಡುಗರಹಳ್ಳಿ ಬಡಾವಣೆಯ ಮಿಲಿಟರಿ ಕ್ಯಾಂಪ್ ಬಳಿ ಮರ ಬಿದ್ದಿದ್ದರಿಂದ ವಿದ್ಯುತ್ ಕಂಬಗಳಿಗೆ ತೀವ್ರ ಹಾನಿಯಾಗಿದೆ.
ಜಾನೇಕೆರೆ, ಅರೆಕೆರೆ ಗ್ರಾಮಗಳಲ್ಲಿ ವಣಗೂರು-ಜನ್ನಾಪುರ ರಾಜ್ಯ ಹೆದ್ದಾರಿಯಲ್ಲಿ ಹತ್ತಾರು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಈ ಮಾರ್ಗದಲ್ಲಿ ಕೆಲ ಗಂಟೆಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಸಕಲೇಶಪುರ-ಬೇಲೂರು ರಸ್ತೆ, ಹಾನುಬಾಳ್ ಸಕಲೇಶಪುರ ರಸ್ತೆ, ಸಕಲೇಶಪುರ ವಿರಾಜಪೇಟೆ ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯ ಹೆದ್ದಾರಿಗಳಲ್ಲಿ ಮರಗಳು ರಸ್ತೆಗೆ ಬಿದ್ದಿರುವುದು ಕಂಡು ಬಂದಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲೆಡೆ ವಿದ್ಯುತ್ ಪೂರೈಕೆ ಇಲ್ಲದೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮಳೆ ವಿಪತ್ತು ಎದುರಿಸಲು ಸಭೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ, ಮಳೆ ವಿಪತ್ತು ಎದುರಿಸಲು ತಾಲೂಕು ಆಡಳಿತ ಸಜ್ಜಾಗಿದೆ. ತೊಂದರೆಯಾದಲ್ಲಿ ಕೂಡಲೇ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆಗೆ 08173-244004 ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.