ಹಾಸನ: ಓರ್ವ ಪಿಎಸ್ಐ ಮಗ ಜಿಲ್ಲೆಯಲ್ಲಿ ಇಸ್ಪೀಟ್ ದಂಧೆ ನಡೆಸುತ್ತಿದ್ದು, ಸಾಕಷ್ಟು ಮಂದಿಗೆ ದಾಂಧಲೆ ಮಾಡ್ತಿದ್ರೂ ಪೊಲೀಸ್ರು ಮಾತ್ರ ಕಣ್ಮುಚ್ಚಿ ಕುಳಿತಿದ್ದೀರಲ್ಲಾ. ಈಗ ನಾವು ನಿಮ್ಮ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸಂಸದ ಪ್ರಜ್ಚಲ್ ರೇವಣ್ಣ ಎಸ್ಪಿಯವರನ್ನು ತರಾಟೆ ತೆಗೆದುಕೊಂಡ್ರು.
ಕೋವಿಡ್-19 ಪ್ರಯುಕ್ತ ಸಂಸದರ ಮತ್ತು ಜಿಲ್ಲಾ ಉಸ್ತುವಾರಿ ಸಭೆಯಲ್ಲಿ ಮಾತನಾಡಿದ ಅವರು, ಪಿಎಸ್ಐ ಮಗ ಇಸ್ಪೀಟ್ ದಂಧೆ ನಡೆಸುತ್ತಿದ್ದಾನೆ. ಮೊನ್ನೆ ಹಾಸನ ಲಾಕ್ ಡೌನ್ ಇದ್ರೂ, ನಗರದ ಬಿ.ಎಂ.ರಸ್ತೆಗೆ ಹೊಂದಿಕೊಂಡಂತಿರುವ ಕ್ವಾಲಿಟಿ ಬಾರ್ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅದನ್ನ ಕೆಲವು ಮಾಧ್ಯಮದವರು ವಿಡಿಯೋ ಮಾಡಲಿಕ್ಕೆ ಹೋದ್ರೆ, ನಾನು ಪಿಎಸ್ಐ ಮಗ. ವಿಡಿಯೋ ಮಾಡಬೇಡಿ. ಮಾಡಿದ್ರೆ, ಜೀವನದಲ್ಲಿ ತುಂಬಾ ರಿಸ್ಕ್ ತಗೊಬೇಕಾಗುತ್ತೆ ಎಂದು ಬೆದರಿಕೆ ಹಾಕ್ತಾನೆ. ಹೀಗಾಗಿ ನಿಮ್ಮ ಕಾನೂನು ಸುವ್ಯವಸ್ಥೆಗೆ ಏನಾಗಿದೆ ಎಂಬುದನ್ನು ನಾವು ಪ್ರಶ್ನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕಿಡಿಕಾರಿದರು.
ಇದಲ್ಲದೇ ಆತ ಶ್ರವಣಬೆಳಗೊಳದಲ್ಲಿ ಇಸ್ಪೀಟ್ ಧಂದೆ ನಡೆಸ್ತಿದ್ದಾನೆ. ಓರ್ವ ಪೊಲೀಸ್ ಮಾಹಿತಿದಾರನಾಗಿ ಕೆಲಸ ಮಾಡ್ತಾನೆ. ಇದ್ರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಾ? ಇದು ಒಬ್ಬರು ಸಂಸದರ ಗಮನಕ್ಕೆ ಬರುವ ತನಕ ನೀವು ಕ್ರಮ ಕೈಗೊಳ್ಳದೆ ಏನ್ ಮಾಡ್ತಿದ್ದೀರಾ? ಎಂದು ತರಾಟೆ ತೆಗೆದುಕೊಂಡ್ರು.
ಇದಕ್ಕೆ ಉತ್ತರಿಸಿದ ಎಸ್ಪಿ ಶ್ರೀನಿವಾಸೌಡ ಶ್ರವಣಬೆಳಗೊಳದಲ್ಲಿ ನಡೆಯುತ್ತಿದ್ದ ಇಸ್ಪಿಟ್ ದಂಧೆ ಅಡ್ಡೆ ಮೇಲೆ ದಾಳಿ ನಡೆಸಿ ಕೆಲವರನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಇನ್ನು ಪಿಎಸ್ಐ ಮಗ ಲಿಖಿತ್ಗೆ ಈಗಾಗಲೇ ನೋಟಿಸ್ ನೀಡಿದ್ದು, ಆ ನೋಟಿಸ್ಗೆ ಉತ್ತರ ಬಂದ ಬಳಿಕ ನಾನು ಕ್ರಮಕೈಗೊಳ್ಳುತ್ತೇನೆ ಎಂದರು.