ಹಾಸನ: ಐಟಿ ದಾಳಿ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಮೊನ್ನೆ ನಡೆದ ದಾಳಿಗೂ ಆದಾಯ ಇಲಾಖೆಗೂ ಯಾವುದೇ ಸಂಬಂಧವಿಲ್ಲ, ಯಾವ ಅಧಿಕಾರಿ ಕೂಡ ದಾಳಿ ನಡೆಸಿಲ್ಲ ಎಂದು ಚುನಾವಣಾ ಆಯೋಗಕ್ಕೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಮೊನ್ನೆ ದೇವೇಗೌಡರ ಕುಲದೇವರು ಆಗಿರುವ ಈಶ್ವರ ದೇವಾಲಯದ ಅರ್ಚಕ ಪ್ರಕಾಶ್ ಭಟ್ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.ಇದರ ಬೆನ್ನಲ್ಲೇ ಅನುಮಾನಗೊಂಡ ಅರ್ಚಕ ಪ್ರಕಾಶ್ ಭಟ್ ಈಗ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ದೇವಸ್ಥಾನದಲ್ಲಿ ಎಂದಿನಂತೆ ಪೂಜೆ ಮಾಡುವ ವೇಳೆ ಮೂರು ಮಂದಿ ಬಂದು ನಾವು ಆದಾಯ ತೆರಿಗೆ ಇಲಾಖೆಯವರು ಚುನಾವಣಾ ಸಂಬಂಧವಾಗಿ ದೇವಾಲಯ ಹಾಗೂ ತಮ್ಮ ಮನೆಯಲ್ಲಿ ಅಕ್ರಮವಾಗಿ ಜನರಿಗೆ ಹಂಚಲು ಹಣ ಮತ್ತು ಇನ್ನಿತರ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ನಮಗೆ ಮಾಹಿತಿ ಬಂದಿದೆ ಎಂದರು.
ಹಾಗಾಗಿ ಪರಿಶೀಲನೆ ನಡೆಸಲು ಅವಕಾಶ ಕೊಡಬೇಕೆಂದು ಹೇಳಿದರು. ಆದಾಯ ತೆರಿಗೆ ಅಧಿಕಾರಿಗಳು ಅಂದ ಬಳಿಕ ನಾನು ಮರು ಮಾತನಾಡದೆ ಅವರಿಗೆ ಅವಕಾಶ ಕೊಟ್ಟೆ. ಆದರೆ ನಮ್ಮ ಮನೆ ಪರಿಶೀಲನೆಯ ಬಳಿಕ ಮನೆಯಲ್ಲಿ ಯಾವುದೇ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಮನೆಯಿಂದ ಹೊರಬಂದು ಮನೆಯ ಸುತ್ತಮುತ್ತ ತಿರುಗಾಡಿ ಬಳಿಕ ಒಂದು ಸಿಲ್ವರ್ ಕಲರ್ನ ಇನೋವಾದಲ್ಲಿ ವಾಪಸ್ಸಾದರು.
ಬಳಿಕ ಅವರು ಮನೆಯಲ್ಲಿ ಟಿವಿ ವೀಕ್ಷಣೆ ಮಾಡುತ್ತಿದ್ದ ವೇಳೆ ಐಟಿ ದಾಳಿಗೂ ಆದಾಯ ಇಲಾಖೆಗೂ ಯಾವುದೇ ಸಂಬಂಧ ಇಲ್ಲ ಎಂಬ ಮಾಹಿತಿ ತಿಳಿದಿದೆ. ನಂತರ ಅರ್ಚಕ ಪ್ರಕಾಶ್ ಭಟ್ ಮನೆಯನ್ನು ಪರಿಶೀಲನೆ ಮಾಡಿದ ಮೂರು ಮಂದಿಯನ್ನ ಪತ್ತೆ ಹಚ್ಚಿ, ಅವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.