ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಆರಂಭದಲ್ಲಿ ವಾರದಲ್ಲಿ ಎರಡು ದಿನ ಜಿಲ್ಲೆಗೆ ಭೇಟಿ ನೀಡುವುದಾಗಿ ಹೇಳಿದ್ದರು. ಆದರೆ ಜಿಲ್ಲೆಗೆ ಬಂದು ಹೋಗಿ 15 ದಿನಗಳೇ ಕಳೆದು ಹೋಗಿವೆ. ಈಗಲಾದರೂ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಲಿ ಎಂದು ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲ ಸ್ವಾಮಿ ಒತ್ತಾಯಿಸಿದರು.
ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡ ತುರ್ತುಸಭೆ ಕರೆದು ಚರ್ಚಿಸಬೇಕು. ಒಂದು ವೇಳೆ ಒಂದೆಡೆ ಸಭೆ ಸೇರಲು ಕಷ್ಟವಾದಲ್ಲಿ ವಿಡಿಯೋ ಸಂವಾದ ನಡೆಸಿ ಜಿಲ್ಲೆಯ ಬಗ್ಗೆ ಚರ್ಚಿಸಬೇಕು. ಮುಂದಿನ ನಿರ್ಧಾರಗಳನ್ನು ಪ್ರಕಟಿಸಬೇಕು ಎಂದರು.
ಕೋವಿಡ್ ನಿರ್ವಹಣೆ ಸರ್ಕಾರದ ಜವಾಬ್ದಾರಿ. ಬೆಂಗಳೂರು ಹಾಗೂ ಇತರ ಕಡೆಗಳಿಂದ ನಿತ್ಯ ಜಿಲ್ಲೆಗೆ ಜನ ಬರುತ್ತಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಏರಿಕೆ ಆಗುತ್ತಿದೆ. ಇಲ್ಲಿಯವರೆಗೆ 953 ಜನರಲ್ಲಿ ಸೋಂಕು ಕಂಡುಬಂದಿದೆ. ಈ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ 400 ರೋಗಿಗಳಿಗೆ ಮಾತ್ರವೇ ಚಿಕಿತ್ಸೆಗೆ ವ್ಯವಸ್ಥೆ ಇದೆ. ಕೋವಿಡ್ ಆಸ್ಪತ್ರೆ ಭರ್ತಿ ಆಗಿದೆ. ಆದ್ದರಿಂದ ತಾಲೂಕು ಆಸ್ಪತ್ರೆಗಳಲ್ಲಿಯೇ ರೋಗ ಲಕ್ಷಣ ಇಲ್ಲದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸಿಗುವಂತಾಗಬೇಕು. ಅದಕ್ಕಾಗಿ ತಾಲೂಕಿನಲ್ಲಿ ವೈದ್ಯರಿಗೆ ತರಬೇತಿ ನೀಡಿ ಸಿದ್ಧತೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೋವಿಡ್ ಎಂದರೆ ಬೆಂಗಳೂರಿಗೆ ಮಾತ್ರ ಬಂದಿದೆ ಎಂದು ಭಾವಿಸಿರುವ ಅನೇಕ ಮಂತ್ರಿಗಳು ಅನೇಕ ಜಿಲ್ಲೆಗಳನ್ನು ಕಡೆಗಣಿಸಿದ್ದಾರೆ. ಕೋವಿಡ್ ಉಪಕರಣಗಳನ್ನು ಮಾರುಕಟ್ಟೆಗಿಂತ ಮೂರುಪಟ್ಟು ಹೆಚ್ಚು ಬೆಲೆಗೆ ಕೊಂಡು, ಅದರಲ್ಲಿ ನನಗೆ ಇಷ್ಟು ಬರಬೇಕು. ನಿನಗೆ ಇಷ್ಟು ಎಂದು ಹಣ ಹಂಚಿಕೊಳ್ಳುವುದರಲ್ಲಿಯೇ ಸಚಿವರು ತಲ್ಲೀನರಾಗಿದ್ದಾರೆ. ಈ ಅವ್ಯವಹಾರದ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಈ ಬಗ್ಗೆ ಧ್ವನಿ ಎತ್ತಿದ್ದು, ಅವರ ಮಾರ್ಗದರ್ಶನದಂತೆ ಜಿಲ್ಲೆಯಲ್ಲಿಯೂ ಪ್ರತಿಭಟನೆ ಮಾಡಲಾಗುವುದು ಎಂದರು.
ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ಮಾತನಾಡಿ, ಹಾಸನ ತಾಲೂಕಿನಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಶಾಸಕ ಪ್ರೀತಂ ಗೌಡ ಜಿಲ್ಲೆಯಲ್ಲಿ ಇದ್ದುಕೊಂಡು ನಿಭಾಯಿಸುವ ಬದಲು, ವಾರದಲ್ಲಿ 6 ದಿನ ಬೆಂಗಳೂರಿನಲ್ಲೇ ಇರುತ್ತಾರೆ. ನಂತರ ಒಂದು ದಿನ ಮಾತ್ರ ಹಾಸನದಲ್ಲಿ ಮುಖ ತೋರಿಸಿ, ಬೆಂಗಳೂರಿಗೆ ತೆರಳುತ್ತಾರೆ ಎಂದು ವ್ಯಂಗ್ಯವಾಡಿದರು.