ಹಾಸನ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೌಕರರು, ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಇಂದಿನಿಂದ ಒಂದು ಗಂಟೆ ಮುಷ್ಕರದೊಂದಿಗೆ ಕೆಲಸಕ್ಕೆ ಹಾಜರಾಗುವುದಾಗಿ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರಲ್ಲಿ ಒಪ್ಪಿಕೊಂಡಿದ್ದಾರೆ.
ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಕಚೇರಿ ಸಿಬ್ಬಂದಿಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 7 ದಿನಗಳಿಂದ್ಲೂ ಕೆಲಸಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಸಾರ್ವಜನಿಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಪರದಾಡುವಂತಾಗಿದೆ.
ಕೊರೊನಾ ಸಂಖ್ಯೆಯಲ್ಲಿ ಜಿಲ್ಲೆ 2ನೇ ಸ್ಥಾನಕ್ಕೆ ಏರಿದ ಹಿನ್ನೆಲೆ ನಮ್ಮ ಮುಷ್ಕರ ಸಲ್ಪ ಸಡಿಲಿಸಿ ಕೆಲಸಕ್ಕೆ ಹಾಜರಾಗುತ್ತೇವೆ. ಆದರೆ, ದಿನಕ್ಕೆ ಒಂದು ಗಂಟೆ ಕೆಲಸ ಮಾಡುವ ಭಾಗದಲ್ಲೇ ಹೊರಗುಳಿದು ಮುಷ್ಕರ ಮಾಡುತ್ತೇವೆ. ಕೂಡಲೇ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಸಚಿವರು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮುಷ್ಕರ ನಿರತರೊಂದಿಗೆ ಮಾತನಾಡಿ, ಕೊರೊನಾ ಇರುವುದರಿಂದ ನೀವು ಸೇವೆ ಮಾಡುವುದು ಸೂಕ್ತ. ನಿಮ್ಮ ಬೇಡಿಕೆ ಏನೇ ಇದ್ದರೂ ರಾಜ್ಯಮಟ್ಟದಲ್ಲಿ ಜಿಲ್ಲಾಡಳಿತದಿಂದ ಸರ್ಕಾರದ ಗಮನಸೆಳೆಯಲಾಗುವುದು. ಜಿಲ್ಲಾ ಮಟ್ಟದಲ್ಲಿ ಏನೇನು ಸಮಸ್ಯೆ ಇದೆ, ಅದನ್ನು ಇಲ್ಲೇ ಬಗೆಹರಿಸುವಂತೆ ಸ್ಥಳದಲ್ಲಿದ್ದ ಡಿಹೆಚ್ಒ ಡಾ. ಸತೀಶ್ ಅವರಿಗೆ ಸೂಚನೆ ನೀಡಿದರು.