ಹಾಸನ/ಅರಕಲಗೂಡು: ಹಾಸನ-ಪಿರಿಯಾಪಟ್ಟಣ ರಸ್ತೆ ಮಾರ್ಗ ಅವೈಜ್ಞಾನಿಕವಾಗಿದೆ. ಅದನ್ನು ಸರಿಪಡಿಸುವವರೆಗೂ ಟೋಲ್ ಸಂಗ್ರಹಿಸಬಾರದು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಅರಕಲಗೂಡು ತಾಲೂಕಿನ ನಿಲುವಾಗಿಲು ಬಳಿ ಹಾಸನ-ಪಿರಿಯಾಪಟ್ಟಣ ರಸ್ತೆ ಮಾರ್ಗದಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರೋಧಿಸಿ ಕಳೆದ ತಿಂಗಳು ಟೋಲ್ ವಸೂಲಿ ಮಾಡದಂತೆ ಪ್ರತಿಭಟನೆ ನಡೆಸಲಾಗಿತ್ತು. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ಸರಿಪಡಿಸುವ ತನಕ ಟೋಲ್ ವಸೂಲಿ ಕೈಬಿಡಲು ಸೂಚಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿಗಳ ಸೂಚನೆ ಧಿಕ್ಕರಿಸಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ರಸ್ತೆ ಹಾದುಹೋಗಿರುವ ಮಾರ್ಗ ಹಾಸನ, ಸಕಲೇಶಪುರ, ಪಿರಿಯಾಪಟ್ಟಣ, ಅರಕಲಗೂಡು ವ್ಯಾಪ್ತಿಯ ನಾಲ್ವರು ಶಾಸಕರಿಗೆ ಒಳಪಡುತ್ತದೆ. ಜನರಿಂದ ಆಯ್ಕೆಯಾದ ಶಾಸಕರು ಜನರು ನಡೆಸುತ್ತಿರುವ ಪ್ರತಿಭಟನೆ, ಮನವಿಗೆ ಬೆಲೆ ಕೊಡದೇ ಆಮಿಷಕ್ಕೆ ಒಳಗಾಗಿ ಮತದಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರಸ್ತೆ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ಮಿಸುವವರೆಗೆ ಟೋಲ್ ಶುಲ್ಕ ವಸೂಲಿಗೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದರು.
ಈ ಹಿಂದೆ ಈಟಿವಿ ಭಾರತ ಅವೈಜ್ಞಾನಿಕ ಮತ್ತು ಮೂಲ ಸೌಕರ್ಯವಿಲ್ಲದೇ ರಸ್ತೆ ನಿರ್ಮಿಸಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ವರದಿ ಮಾಡಿದ್ದ ಹಿನ್ನೆಲೆ ಡಿ.27ರಂದು ಸ್ಥಳೀಯರು ಮತ್ತು ಸಂಘ ಸಂಸ್ಥೆಯವರು ಬೃಹತ್ ಪ್ರತಿಭಟನೆ ಮಾಡಿದ್ದರಿಂದ ತಾತ್ಕಾಲಿಕವಾಗಿ ಟೋಲ್ ಸಂಗ್ರಹಕ್ಕೆ ಬ್ರೇಕ್ ಬಿದ್ದಿತ್ತು.