ಹಾಸನ: ಹಿಂದಿನ ಕಾಲದ ಕಥೆಗಳು ಇಂದಿಗೂ ನಮ್ಮ ಕಣ್ಮುಂದೆ ಹಾದು ಹೋಗುತ್ತಿರುವುದಕ್ಕೆ ಪೌರಾಣಿಕ ನಾಟಕಗಳು ಕಾರಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಜಿಲ್ಲೆಯ ಆಲೂರು ಪಟ್ಟಣದ ಶ್ರೀಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ‘ಕುರು ಪಾಂಡವರ ಸಂಗ್ರಾಮ’ ಅಥವಾ ‘ಸರ್ಪಲಾಂಛನ ಪತನ’ ಎಂಬ ಪೌರಾಣಿಕ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಹೆಚ್ ಕೆ ಕುಮಾರಸ್ವಾಮಿ, ಪೌರಾಣಿಕ ನಾಟಕಗಳು ನಾವು ಕಂಡರಿಯದ ಕಲಾ ಹಂದರಗಳನ್ನು ನೀಡುತ್ತಾ ಸಮಾಜವನ್ನು ತಿದ್ದುವಂತಹ ಕೆಲಸ ಮಾಡುತ್ತಿವೆ. ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸುವ ಕಲಾವಿದರನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುತಿಸಿ ಪ್ರೋತ್ಸಾಹಿಸಬೇಕು. ಆರ್ಥಿಕ ಸಹಾಯ ಮತ್ತು ಮಾಸಾಶನ ಹೆಚ್ಚಳ ಮಾಡಿ ಅವರ ಕಲೆಯನ್ನ ಸಮಾಜ ಆರಾಧಿಸುವಂತೆ ಮಾಡಬೇಕು ಎಂದು ಹೇಳಿದರು.
ಕಲೆ ಮನುಷ್ಯನ ಆರೋಗ್ಯದ ಮದ್ದು. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕಲೆ ಎನ್ನುವುದು ಎಲ್ಲರಿಗೂ ಬರುವಂಥದ್ದಲ್ಲ. ಕೆಲವೇ ಕೆಲವರಲ್ಲಿ ತುಂಬಿಕೊಂಡಿದೆ. ಆದ್ದರಿಂದ ಕಲಾವಿದರನ್ನು ಗುರುತಿಸಿ ಅವರಿಗೆ ಆರ್ಥಿಕವಾಗಿ ಸರ್ಕಾರಗಳು ಹಾಗೂ ಜನಸಾಮಾನ್ಯರು ಶಕ್ತಿ ತುಂಬಬೇಕಿದೆ. ಪೌರಾಣಿಕ ನಾಟಕಗಳಲ್ಲಿನ ಪಾತ್ರಗಳು ವಿಭಿನ್ನವಾಗಿದ್ದು, ಅವರ ತತ್ತ್ವ ಆದರ್ಶಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಎಪಿಎಂಸಿ ಅಧ್ಯಕ್ಷ ಮಂಜೇಗೌಡ ತಿಳಿಸಿದರು.