ಹಾಸನ: ಈಗಾಗಲೇ ಜಿಲ್ಲೆಯ ಲೋಕಸಭಾ ಚುನಾವಣೆ ಫಲಿತಾಂಶ ಅಂತಿಮವಾಗಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ಎ.ಮಂಜು ಅವರು ಬಿಜೆಪಿಯಿಂದ ಸ್ಪರ್ಧಿಸಿದರೆ ಪ್ರಬಲ ಪೈಪೋಟಿ ಎದುರಾಗುವುದಿಲ್ಲವೇ ಎಂಬುದಕ್ಕೆ,
ಜಿಲ್ಲೆಯ ಚುನಾವಣೆ ಫಲಿತಾಂಶ ಈಗಾಗಲೇ ನಿಶ್ಚಿತವಾಗಿದೆ. ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವರು ಎಂದರು.
ಇನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಇದು ನನ್ನ ಕೊನೆ ಚುನಾವಣೆ ಎಂದಾಗ ಕುಟುಂಬದವರು ಕಂಬನಿ ಮಿಡಿದ ಸನ್ನಿವೇಶಕ್ಕೆ ಲೇವಡಿ ಮಾಡಿದ್ದ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ವಿಚಾರ. ದೇವೇಡೌಡ್ರ ಬಗ್ಗೆ ಈ ಹಿಂದೆಯೂ ಒಮ್ಮೆ ಅವರು ಲಘುವಾಗಿ ಹೇಳಿಕೆ ನೀಡಿದ್ದರು. ಅದೊಂದು ಭಾವನಾತ್ಮಕ ಸಭೆ. ಆರು ದಶಕಗಳು ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳನ್ನು ದೇವೇಗೌಡರು ಎದುರಿಸಿದ್ದಾರೆ ಎಂದರು.
ಪ್ರಜ್ವಲ್ ಕ್ಷೇತ್ರದ ಅಭ್ಯರ್ಥಿಯೆಂದು ಜನತೆ ಸುಲಭವಾಗಿ ಒಪ್ಪಿಕೊಳ್ಳುವರೇ ಎಂಬ ಪ್ರಶ್ನೆಗೆ, ಜಿಲ್ಲೆಯಲ್ಲಿ ದೇವೇಗೌಡರ ತೀರ್ಮಾನವೇ ಅಂತಿಮ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವಾಗ ಹೊಂದಾಣಿಕೆ ಅತ್ಯಗತ್ಯ ಎಂದು ಸಮರ್ಥಿಸಿಕೊಂಡರು.