ಹಾಸನ: ಈಗ ಬಂದಿರುವ ಕಾಯಿಲೆ ಮುಂದೆ ಜಡತ್ವದಂತಹ ಕಲ್ಲು, ಮರಕ್ಕೂ ಆವರಿಸಲಿದೆ. ಆದರೆ ಭಾರತದ ಭೂಮಿಗೆ ಎಂತಹ ರೋಗ ಬಂದರೂ ತಡೆಯುವ ಶಕ್ತಿಯಿದೆ ಎಂದು ಕೊರೊನಾ ವೈರಸ್ ಬಗ್ಗೆ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠದಲ್ಲಿ ಮಾತನಾಡಿದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಋಷಿ ಮುನಿಗಳ ಮಂತ್ರ, ಜಪ ತಪ ಶಕ್ತಿ ನಮ್ಮ ದೇಶದ ರಕ್ಷಣೆ ಮಾಡಿಕೊಂಡು ಬರುತ್ತಿದೆ. ಈ ತಂತ್ರಜ್ಞಾನ ಯುಗದಲ್ಲಿ ಮಾನವ ಎಲ್ಲಾ ಪಡೆದುಕೊಂಡ. ಆದರೆ ಶಾಂತಿ ಪಡೆಯಲಿಲ್ಲ. ಕೊರೊನಾದಂತ ಭಯಂಕರ ರೋಗಕ್ಕೆ ಮನುಷ್ಯ ಹೆದರದೆ ನಂಬಿಕೆ ಉಳಿಸಿಕೊಂಡು ದೇವರ ಮೇಲೆ ಸಂಕಲ್ಪ ಮಾಡಬೇಕು. ಆಗ ಅವನಿಗೆ ಏನೂ ಆಗುವುದಿಲ್ಲ ಎಂದು ಶ್ರೀಗಳು ಹೇಳಿದರು.
ಇಂದು ಈ ರೀತಿಯ ಘಟನೆಗಳಿಗೆ ಕಾರಣ ಪ್ರಕೃತಿಯನ್ನು ಹಾಳು ಮಾಡಿದ್ದು. ಮನುಷ್ಯ ಎಲ್ಲಿ ಕಳೆದುಕೊಂಡಿದ್ದಾನೆ ಅಲ್ಲೇ ಹುಡುಕಬೇಕು. ಪ್ರಕೃತಿಯಿಂದಲೇ ಕಳೆದುಕೊಂಡಿದ್ದಾನೆ, ಅಲ್ಲಿಯೇ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಶ್ರೀಗಳು ಹೇಳಿದರು. ಕೊರೊನಾ ವೈರಸ್ ಋಷಿ ಮುನಿ ಕೊಟ್ಟ ಗಿಡಮೂಲಿಕೆ, ಹಳ್ಳಿ ನಾಟಿ ವೈದ್ಯರಿಂದಲೂ ಹುಷಾರಾಗುತ್ತೆ. ಈಗ ಬಂದ ಕಾಯಿಲೆ ರೀತಿ ಮುಂದೆ ಜಡತ್ವದಂತಹ ಕಲ್ಲು, ಮರಕ್ಕೂ ಆವರಿಸುತ್ತೆ. ದೈವ ಮತ್ತು ಪ್ರಕೃತಿಯನ್ನು ಕಾಪಾಡಿದರೆ ಮಾತ್ರ ಉಳಿವು ಸಾಧ್ಯ. ಅನ್ನ ಭೂಮಿಯಿಂದ ಬಂದು ನಮಗೆ ಶಕ್ತಿ ಸಿಕ್ಕಿದೆ. ಹೀಗಾಗಿ ಈ ರೋಗಗಳೆಲ್ಲಾ ಮನುಷ್ಯ ಪ್ರಕೃತಿ ಮೇಲೆ ಮಾಡುತ್ತಿರುವ ದಬ್ಬಾಳಿಕೆಯಿಂದ ಬಂದಿರೋದು ಎಂದು ಬೇಸರ ವ್ಯಕ್ತಪಡಿಸಿದರು.