ಸಕಲೇಶಪುರ: ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ವನಗೂರು ಗ್ರಾ.ಪಂ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಭೂಮಿ ಅತಿಕ್ರಮಣಕ್ಕೆ ಕಾಣದ ಕೈಗಳು ಯತ್ನ ನಡೆಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಸರ್ಕಾರಿ ಶಾಲೆ ಸುಮಾರು 6 ಎಕರೆ ಭೂಮಿ ಹೊಂದಿದ್ದು, ಇದರಲ್ಲಿ ವಿಶಾಲವಾದ ಕ್ರೀಡಾಂಗಣ ಹಾಗೂ ಕೈದೋಟ ಸಹ ನಿರ್ಮಿಸಲಾಗಿದೆ. ಆದರೆ ಕಳೆದ ಎರಡು ದಿನಗಳ ಹಿಂದೆ ಅನಾಮಿಕ ವ್ಯಕ್ತಿಗಳು ಶಾಲೆಗೆ ಸೇರಿದ ಭೂಮಿಯಲ್ಲಿ ರಾತ್ರೋರಾತ್ರಿ ಕಟ್ಟಡ ನಿರ್ಮಿಸುವ ಮೂಲಕ ಶಾಲೆಯ ಜಮೀನು ಕಬಳಿಕೆಗೆ ಯತ್ನ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ತಾಲೂಕಿನ ದೇವಾಲಕೆರೆ ಗ್ರಾಮದಲ್ಲಿ ಇಂತಹದೆ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಶಿಕ್ಷಣ ಸಚಿವರು ಬೇಟಿ ನೀಡಿ ಪರಿಶೀಲನೆ ನಡೆಸಿ ದಾಖಲೆ ಇಲ್ಲದ ಶಾಲಾ ಭೂಮಿಗಳಿಗೆ ತುರ್ತು ದಾಖಲೆ ಸಿದ್ದಪಡಿಸುವಂತೆ ತಾಲೂಕು ಆಡಳಿತಕ್ಕೆಸೂಚಿಸಿದ್ದರು.
ಈ ಕುರಿತು ಗ್ರಾಮಸ್ಥರು ಗ್ರಾ.ಪಂ. ಅಧಿಕಾರಿಗಳು ಹಾಗೂ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರೂ ಸಹ ಪ್ರಯೋಜನವಾಗದ ಹಿನ್ನೆಲೆ, ಕೂಡಲೆ ಅಕ್ರಮವಾಗಿ ಕಟ್ಟಿರುವ ಮನೆಯನ್ನು ತೆರೆವುಗೊಳಿಸುವಂತೆ, ಹಿಜ್ಜನಹಳ್ಳಿ, ಬಾಣಗೇರಿ, ಮಾಗೇರಿ ಸುತ್ತ ಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನೆಡೆಸಿದರು. ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಭೇಟಿ ನೀಡಿ ಪರೀಶಿಲಿಸಿದ್ದು, ಗ್ರಾಮಸ್ಥರು ಇವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.