ಹಾಸನ: ಕೊಡಗು ಭಾಗದಿಂದ ಹಾಸನ ಜಿಲ್ಲೆಗೆ ನುಸುಳುವ ಕಾಡಾನೆಗಳ ಹಾವಳಿ ತಡೆಯಲು ಹಾಸನದ ಆಲೂರಿನ ನಾಗವಾರ ಆನೆ ಶಿಬಿರದಿಂದ ರೈಲ್ವೇ ಬ್ಯಾರಿಕೇಡ್ ಅಳವಡಿಸೋ ಮೊದಲ ಹಂತದ ಕಾರ್ಯವನ್ನು ಅರಣ್ಯ ಇಲಾಖೆ ಆರಂಭಿಸಿದೆ.
ಕೊಡಗಿನ ಆನೆಗಳ ಹಿಂಡು ಹೇಮಾವತಿ ಹಿನ್ನೀರಿನ ಪ್ರದೇಶದ ಮೂಲಕ ಹಾಸನ ಗಡಿಗೆ ನುಸುಳುತ್ತಿವೆ. ಹಾಗಾಗಿ ನಾಗವಾರ ಆನೆ ಶಿಬಿರ ಬಳಿಯಿಂದ ಈಗಾಗಲೇ 4.24 ಕಿ.ಮೀ. ಅಂತರಕ್ಕೆ ಮೊದಲ ಹಂತದ ರೈಲ್ವೇ ಬ್ಯಾರಿಕೇಡ್ ಅಳವಡಿಸೋ ಕಾರ್ಯ ನಡೆದಿದ್ದು, ಒಂದು ವಾರದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ.
ಆಲೂರಿನ ನಾಗವಾರ ಆನೆ ಶಿಬಿರದಿಂದ ಆರಂಭವಾಗಿರೋ ಈ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾರ್ಯ ಪುರಬೈರವನಹಳ್ಳಿವರೆಗೂ ಮೊದಲ ಹಂತದ ರೈಲ್ವೇ ಹಳಿ ಸುತ್ತಿಕೊಂಡು ಬರಲಿದೆ. ಆದ್ರೆ ಇಲ್ಲಿನ ಗ್ರಾಮಸ್ಥರ ಪ್ರಕಾರ, ಸುಮಾರು 40 ಕಿಲೋ ಮೀಟರ್ ರೈಲ್ವೇ ಬ್ಯಾರಿಕೇಡ್ ನಿರ್ಮಾಣ ಆದ್ರೆ ಮಾತ್ರ ಸ್ವಲ್ಪ ಮಟ್ಟಿಗಿನ ಆನೆಹಾವಳಿ ತಡೆಯಲು ಸಾಧ್ಯ. ಈ ರೀತಿ ಕೇವಲ 4 ಕಿಲೋಮಿಟರ್ ರೈಲ್ವೇ ಹಳಿ ತಡೆಗೋಡೆ ಮಾಡಿ ಅರ್ಧಕ್ಕೆ ನಿಲ್ಲಿಸಿದ್ರೆ, ಆನೆಗಳನ್ನೆ ತಂದು ಕೂಡಿ ಹಾಕಿದಂತಾಗುತ್ತೆ. ಇದ್ರಿಂದ ನಮಗೆ ಇನ್ನೂ ತೊಂದರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿ, ಈ ರೀತಿ ಯೋಜನೆ ಬದಲು ನಮ್ಮ ಜಮೀನುಗಳನ್ನೇ ಸರ್ಕಾರ ಖರೀದಿ ಮಾಡಲಿ ಎಂದು ತಮ್ಮ ನೋವು ತೋಡಿಕೊಂಡರು.
ಈಗ 4.24 ಕಿಲೋಮೀಟರ್ ದೂರದ ರೈಲ್ವೇ ಬ್ಯಾರಿಕೇಡ್ ಅಳವಡಿಸಲು 5.28 ಕೋಟಿ ವೆಚ್ಚ ಆಗಲಿದ್ದು, ಸರ್ಕಾರ ಮೊದಲ ಹಂತದ 4.65 ಕೋಟಿ ಬಿಡುಗಡೆ ಮಾಡಿದೆ. ಆದ್ರೆ ವಾಸ್ತವವಾಗಿ 40 ಕಿ. ಮೀ. ರೈಲ್ವೇ ಬ್ಯಾರಿಕೇಡ್ ಅಳವಡಿಕೆ ಈ ಭಾಗದಲ್ಲಿ ಬೇಕಾಗಿದ್ದು, ಈಗ ಕೇವಲ 4 .65 ಕಿಲೋಮಿಟರ್ ಕಾಮಗಾರಿ ಮಾತ್ರ ಪೂರ್ಣಗೊಳ್ಳುವ ಹಂತದಲ್ಲಿದೆ.
ಇದನ್ನೂ ಓದಿ: ದುಬಾರೆ ಕ್ಯಾಂಪ್ನಿಂದ ಕಾಡು ಸೇರಿ ವರ್ಷವಾದ್ರೂ ಹಿಂದಿರುಗದ ಕುಶ : ಸಾಕಾನೆಗಾಗಿ ಅರಣ್ಯ ಇಲಾಖೆ ಅಲೆದಾಟ
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಕೊಡಗು ಭಾಗದಿಂದ ಬರುವ ಆನೆಗಳಿಗಿಂತ, ನಮ್ಮ ಜಿಲ್ಲೆಯ ಕಾಫಿ ತೋಟದಲ್ಲಿ ಬೆಳೆದ ಆನೆಗಳ ಹಾವಳಿಯೇ ಹೆಚ್ಚಾಗುತ್ತಿವೆ. ಕೇವಲ ನಾಲ್ಕು ಕಿಲೋಮೀಟರ್ಗೆ ರೈಲ್ವೆ ಕಂಬಿಗಳನ್ನು ಅಳವಡಿಸಿದರೆ ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ಕಡಿಮೆಯಾಗುವುದಿಲ್ಲ. ಸಕಲೇಶಪುರ ಭಾಗದ ಸುಮಾರು 40 ಕಿಲೋಮೀಟರ್ ಅಂತರದ ಗಡಿಭಾಗಕ್ಕೆ ರೈಲ್ವೆ ಬ್ಯಾರಿಕೇಡ್ ಅನ್ನು ನಿರ್ಮಾಣ ಮಾಡಿದರೆ ಮಾತ್ರ ಕೊಡಗಿನಿಂದ ಬರುವಂತಹ ಆನೆಗಳನ್ನು ತಡೆಗಟ್ಟಬಹುದು. ಈಗ ಮಾಡುತ್ತಿರುವ ಕಾಮಗಾರಿ ಅವೈಜ್ಞಾನಿಕ ಎಂಬುದು ಸ್ಥಳೀಯರ ಆರೋಪವಾಗಿದೆ.