ಹಾಸನ: ದೊಡ್ಡಗದ್ದವಳ್ಳಿಯ ಕಾಳಿಕಾದೇವಿ ಭಗ್ನ ಪ್ರಕರಣ ಜರುಗಿ ಇಂದಿಗೆ ಒಂದು ತಿಂಗಳಾದ್ರೂ ಕೂಡ ಈವರೆಗೂ ಯಾವುದೇ ತನಿಖೆ ಕೈಗೊಳ್ಳದ ಸರ್ಕಾರದ ವಿರುದ್ಧ ಭಕ್ತರು ಮತ್ತು ಅರ್ಚಕರು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ನೂರಾರು ಕಡೆ ಹೊಯ್ಸಳರು ನಿರ್ಮಿಸಿದ ಸಹಸ್ರಮಾನದ ದೇವಾಲಯಗಳು ಇಂದಿಗೂ ನಮ್ಮ ಕಣ್ಣಮುಂದಿವೆ. ಅದ್ರಲ್ಲಿ ಕೆಲವು ಅಳಿವಿನಂಚಿನೆಡೆಗೆ ಸಾಗಿದ್ರೆ, ಇನ್ನು ಕೆಲವು ದೇವಾಲಯಗಳು ಭಕ್ತರ ಪೂಜೆಗೆ ಪಾತ್ರವಾಗಿದೆ.
ಅದರಲ್ಲಿ ಬೇಲೂರು, ಹಳೆಬೀಡು, ರಾಮನಾಥಪುರದ ದೇವಾಲಯ, ಚನ್ನರಾಯಪಟ್ಟಣದ ನುಗ್ಗೇಹಳ್ಳಿ, ಚೌಡೇನಹಳ್ಳಿ, ಆನೆಕೆರೆಯ ಚನ್ನಕೇಶವ ದೇವಾಲಯಗಳು ಸೇರಿದಂತೆ ನೂರಾರು ದೇವಾಲಯಗಳು ಸಾಕ್ಷಿಯಾಗಿವೆ.
ಸದ್ಯ ತಾಲೂಕಿನ ದೊಡ್ಡಗದ್ದವಳ್ಳಿಯ ಲಕ್ಷ್ಮಿದೇವಾಲಯವೂ ಪುರಾತತ್ವ ಇಲಾಖೆಗೆ ಒಳಪಟ್ಟಿರುವ ಐತಿಹಾಸಕ ಪ್ರಸಿದ್ದ ದೇವಾಲಯ ಈಗ ನಿರ್ಲಕ್ಷ್ಯಕ್ಕೊಳಗಾಗಿದೆ. ಅತಾಚುರ್ಯವೋ ಅಥವಾ ದುಷ್ಕರ್ಮಿಗಳ ದುಷ್ಕೃತ್ಯವೋ ಲಕ್ಷ್ಮಿ ದೇವಾಲಯದ ಒಳಗಿದ್ದ ಕಾಳಿಕಾ ಮೂರ್ತಿ ಭಗ್ನಗೊಂಡು ಇಂದಿಗೆ ಸರಿಯಾಗಿ ಒಂದು ತಿಂಗಳು ಕಳೆದಿದೆ. ಆದ್ರೆ, ಭಗ್ನವಾಗಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದ್ದು, ಸರ್ಕಾರದ ನಿರ್ಲಕ್ಷ್ಯತನವೂ ಎದ್ದು ಕಾಣುತ್ತಿದೆ.
ರಾತ್ರಿ ವೇಳೆ ಸರಿಯಾದ ರಕ್ಷಣೆ ಮಾಡಲು ಕಾವಲುಗಾರರಿಂದ ಹಿಡಿದು, ಸಿಸಿಟಿವಿಯ ದೃಶ್ಯ ದೊರಕದೆ ಇರುವುದು ನಿರ್ಲಕ್ಷ್ಯವನ್ನ ಎತ್ತಿ ಹಿಡಿದಿದೆ. ಇದಲ್ಲದೇ ಘಟನೆ ನಡೆದ ಒಂದು ತಿಂಗಳಿಂದ ಹೊರಗಿನಿಂದ ಬರುವ ಭಕ್ತರಿಗಷ್ಟೇ ಅಲ್ಲ, ಸ್ಥಳೀಯರಿಗೂ ದೇವಿ ದರ್ಶನ ಮಾಡುವ ಅವಕಾಶವನ್ನ ಸರ್ಕಾರ ನೀಡುತ್ತಿಲ್ಲ. ಇದ್ರಿಂದ ಭಕ್ತರ ಮತ್ತು ಪ್ರವಾಸಿಗರು ಬಂದು ವಾಪಸ್ಸಾಗುತ್ತಿದ್ದಾರೆ.
ತನಿಖೆಗೆ ಆಗ್ರಹ : ಘಟನೆ ನಡೆದ 2-3 ದಿನದ ನಂತ್ರ ಜಿಲ್ಲಾಡಳಿತ ತನಿಖೆ ನಡೆಸುವ ಭರವಸೆಯನ್ನ ನೀಡಿ ಕಣ್ಣೊರೆಸುವ ತಂತ್ರ ಮಾಡಿದೆ. ಹಾಗಾಗಿ ತನಿಖೆಯನ್ನ ಚುರುಕುಗೊಳಿಸಿ ದೇವಾಲಯದ ಬೀಗ ತೆರೆಯುವ ಮೂಲಕ ಮೊದಲಿನಂತೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಹಾಸನ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರ ಆಗ್ರಹವಾಗಿದೆ.
ದೇವಾಲಯ ಭದ್ರತೆಗೆ ಒತ್ತಾಯ : ದೇವಾಲಯ ಮುಚ್ಚಿ ತಿಂಗಳಾಗಿದೆ. ಕಳೆದ 15 ದಿನಗಳ ಹಿಂದೆ 2 ಸಿಸಿ ಟಿವಿಯನ್ನ ಅಳವಡಿಸಲಾಗಿದೆ. 2 ವಿದ್ಯುತ್ ದೀಪಗಳನ್ನ ಅಳವಡಿಸುವುದರ ಜೊತೆಗೆ ರಾತ್ರಿಪಾಳಯದಲ್ಲಿ ತಾತ್ಕಾಲಿಕವಾಗಿ ಇಬ್ಬರನ್ನು ನೇಮಿಸಲಾಗಿದೆ. ಲಕ್ಷ್ಮಿ, ಶಿವ, ಕಾಲಭೈರವ ದೇವಾಲಯಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ದುರ್ಗಿ ಅಥವಾ ಕಾಳಿಕಾ ದೇವಾಲಯದ ವೀಕ್ಷಣೆಗೆ ಅವಕಾಶ ನೀಡಿಲ್ಲ. ವಾರದೊಳಗೆ ಅವಕಾಶ ನೀಡುತ್ತೇವೆ ಎನ್ನುತ್ತಿದ್ದಾರೆ. ಆದ್ರೆ, ಮೊದಲು ಭಗ್ನಗೊಳಿಸಿದವರ್ಯಾರು ಎಂಬುದು ಗೊತ್ತಾಗಬೇಕು. ಮತ್ತು ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹ.
ತಿಂಗಳ ಹಿಂದೆ ನಿಧಿಯಾಸೆಗಾಗಿಯೋ ಅಥವಾ ಇನ್ಯಾವುದೋ ಕಾರಣಗಳಿಂದ ಪುರಾತತ್ವ ಇಲಾಖೆಗೆ ಸೇರಿದ ಲಕ್ಷ್ಮಿ ದೇವಾಲಯದಲ್ಲಿನ ಕಾಳಿಕಾ ವಿಗ್ರಹ ಭಗ್ನವಾಗಿ ರುಂಡ-ಮುಂಡಗಳು ಬೇರ್ಪಟ್ಟಿದ್ದವು. ಬಳಿಕ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆಯ ವಿವಿಧ ಅಧಿಕಾರಿಗಳು ಬಂದು ಪರಿಶೀಲಿಸಿ ತನಿಖೆಗೆ ಆದೇಶಿಸಿದ್ರು.
ಆದ್ರೆ, ತಿಂಗಳಾದ್ರೂ ತನಿಖೆ ಕುಂಟುತ್ತಾ ಸಾಗಿದೆ. ಪ್ರಕರಣ ಬೇಧಿಸಲು ವಿವಿಧ ಇಲಾಖೆಗಳು ವಿಫಲವಾಗಿವೆ. ಹಾಗಾಗಿ ನಿರ್ಲಕ್ಷ್ಯ ಮಾಡುವ ಬದಲು ದೇವಿಯ ಪುನರ್ ನಿರ್ಮಾಣ ಕಾರ್ಯವಾಗುವ ಜೊತೆಗೆ ತಪ್ಪಿತಸ್ಥರು ಕಂಡು ಬಂದ್ರೇ ತಕ್ಕ ಶಿಕ್ಷೆಯಾಗಬೇಕು ಎಂಬುದು ಸ್ಥಳೀಯರ ಆಗ್ರಹ.