ಹಾಸನ/ ಸಕಲೇಶಪುರ: ದೇಶದ ಸೈನಿಕರಿಗೆ ಶೂ ಇರಲಿಲ್ಲ, ತೊಡಲು ಬಟ್ಟೆ ಇರಲಿಲ್ಲ, ಟೋಪಿ ಇರಲಿಲ್ಲ, ಎಲ್ಲವನ್ನೂ ನಾನೇ ಜೋಡಿಸಿದೆ ಎಂದು ಸಂಸತ್ ಒಳಗೆ ಪ್ರಧಾನಿ ಹೇಳುವುದು ಎಷ್ಟು ಅಪಹಾಸ್ಯ ಎಂದು ಜೆಡಿಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಹಾನುಬಾಳು ಹೋಬಳಿಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಸೈನಿಕರಿಗೆ ಎಲ್ಲವನ್ನೂ ನಾನು ಕೊಡಿಸಿದ್ದು ಎನ್ನುತ್ತಾರೆ. ಹಾಗಾದರೆ ಕಾರ್ಗಿಲ್ ಯುದ್ಧದಲ್ಲಿ ಸೈನಿಕರಿಗೆ ಶೂ, ಬಟ್ಟೆ ಹಾಗೂ ಟೋಪಿ ಇರಲಿಲ್ಲವೇ? ಎಂದು ಪ್ರಶ್ನಿಸಿದರು.
ನನ್ನ ಕಾಲದಲ್ಲಿ ರಾಜಕೀಯ ಕುಮ್ಮಕ್ಕು ಕೊಟ್ಟು ಆದಾಯ ತೆರಿಗೆ ದಾಳಿ ಮಾಡಿಸಿದ್ದೇನಾ? ದೇಶದಲ್ಲಿ ಅಂತಹದನ್ನು ವಿರೋಧಿಸುವರನ್ನು ಹುಡುಕಿ ರಾಜಕೀಯದಲ್ಲಿ ವ್ಯಕ್ತಿತ್ವ ಹಾಳು ಮಾಡಲು ಮುಂದಾಗಿದ್ದಾರೆ. ಇವೆಲ್ಲವನ್ನೂ ದೇಶದ 130 ಕೋಟಿ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
ಕಾಶ್ಮೀರದಲ್ಲಿ ಬುದ್ಧರು, ಹಿಂದೂ, ಮುಸಲ್ಮಾನರು ಹಾಗೂ ಕ್ರಿಶ್ಚಿಯನ್ನರು ಇದ್ದಾರೆ. ಈಗಾಗಲೇ ಅಲ್ಲಿ ಪ್ರವಾಸೋದ್ಯಮ ತಗ್ಗಿದೆ. ಅಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾವು ಜಮೀನಿನ ಮೇಲೆ ಸಾಲ ಮಾಡಿದ್ದೇವೆ, ಬ್ಯಾಂಕ್ನವರು ಜಪ್ತಿ ಮಾಡುತ್ತೇವೆ ಎನ್ನುತ್ತಿದ್ದಾರೆ. ನಮಗೆ ಉದ್ಯೋಗ ಕೊಡಿ ಎಂದು ಜನರು ಕೇಳ್ತಿದ್ದಾರೆ. ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ, ಒಮ್ಮೆ ಆಂಧ್ರದಲ್ಲಿ ದನದ ಮಾಂಸ ತಿಂದರೆಂದು ದಲಿತರಿಗೆ ಹೊಡೆದಿದ್ದಕ್ಕೆ, ಅವರಿಗೆ ಹೊಡಿಬೇಡಿ, ನನ್ನನ್ನೇ ಕೊಲ್ಲಿ ಎಂದು ಮೋದಿ ಅವರೇ ಹೇಳಿದ್ದು ನೆನಪಿದೆ. ನಾನು 13 ಪಕ್ಷಗಳನ್ನು ಕಟ್ಟಿಕೊಂಡು ಪ್ರಧಾನಿಯಾಗಿದ್ದಾಗ ಹೀಗೆ ಆಗಿರಲಿಲ್ಲ. ಹಾಗಾದರೆ ಇಂತಹ ಸ್ಥಿತಿ ಈ ದೇಶಕ್ಕೆ ಈಗ ಏಕೆ ಬಂತು ಎಂದು ಪ್ರಶ್ನಿಸಿದರು.