ಹಾಸನ: ಅರಸೀಕೆರೆ ಕೇಸರಿ ಪಾಳಯದಲ್ಲಿ ಗುಂಪುಗಾರಿಕೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಬಲವರ್ಧನೆ ಮಾಡಲು ಬಂದಿರುವ ಯುವ ನಾಯಕನ ವಿರುದ್ಧ ಸ್ವಪಕ್ಷೀಯರೇ ಪ್ರತಿಭಟನೆ ಮಾಡುತ್ತಿದ್ದು, ಇವರಿಬ್ಬರ ನಡುವಿನ ಆಂತರಿಕ ಜಗಳದ ಚೆಂಡು ಈಗ ರಾಜ್ಯ ನಾಯಕರ ಅಂಗಳದಲ್ಲಿ ಬಿದ್ದಿದೆ.
ಮೊದಲಿಂದಲೂ ಕೂಡ ಬಿಜೆಪಿಯಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿಕೊಂಡು ಬಂದಿದ್ದ ಜಿವಿಟಿ ಬಸವರಾಜ್ ಗೆ ಈ ಮೊದಲು ಅರಸೀಕೆರೆಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ನೀಡಿತ್ತು. ಆದರೆ ಬಿಜೆಪಿಯನ್ನು ಮತ್ತಷ್ಟು ಬಲವರ್ಧನೆ ಮಾಡಲು ಬಂದಿರುವ ಎನ್ ಆರ್ ಸಂತೋಷ್ ಪಕ್ಷವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಪದಗ್ರಹಣ ಮಾಡುವ ಹಿಂದಿನ ದಿನ ನನ್ನ ಹೆಸರನ್ನ ತಡೆಹಿಡಿದು ಸ್ವಾರ್ಥಕ್ಕಾಗಿ ತನ್ನ ಬೆಂಬಲಿಗರಿಗೆ ಅಧ್ಯಕ್ಷ ಸ್ಥಾನವನ್ನು ಕೊಡಿಸಿರುವ ಸಂತೋಷ್ ಪಕ್ಷವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಹೀಗಾಗಿ ಅರಸೀಕೆರೆಯಲ್ಲಿ ಕಮಲ ಈಗ ಎರಡು ಭಾಗವಾಗಿದೆ ಎಂಬ ಮಾತುಗಳು ಮುಖಂಡರಿಂದ ವ್ಯಕ್ತವಾಗುತ್ತಿವೆ.
ಈಗಾಗಲೇ ಕ್ಷೇತ್ರದಲ್ಲಿ ಆಗಿರುವ ಅಕ್ರಮ ಕಾಮಗಾರಿ, ಸ್ವಚ್ಛತೆ ಮತ್ತು ಇತರೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಶಾಸಕರಿಗೆ ನಾವು ನಿದ್ದೆಗೆಡಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಶಾಸಕರ ಪರವಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಕ್ಷೇತ್ರಕ್ಕೆ ಕಳಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ಮುಖಂಡರು ವ್ಯಂಗ್ಯವಾಡುತ್ತಿದ್ದಾರೆ.