ಹಾಸನ: 159 ವರ್ಷಗಳ ಇತಿಹಾಸವುಳ್ಳ ಮಾಡಳು ಗೌರಮ್ಮ ಜಾತ್ರಾಮಹೋತ್ಸವವನ್ನು ಈ ಬಾರಿ ಕೊರೊನಾ ಪ್ರಯುಕ್ತ ರದ್ದುಗೊಳಿಸಲಾಗಿದೆ. ಆದರೆ, ಭಕ್ತರ ಆಸೆಯಂತೆ ಈ ಬಾರಿ ಗೌರಿ ಪ್ರತಿಷ್ಠಾಪನೆಯ ದಿನವೇ ನಿಮಜ್ಜನವನ್ನೂ ಮಾಡಲಾಗಿದೆ.
ಭಾದ್ರಪದ ಮಾಸದಲ್ಲಿ ಕಡಲೆಹಿಟ್ಟು ಮತ್ತು ಅರಿಶಿಣದಿಂದ ಗೌರಿ ಮೂರ್ತಿಯನ್ನು ವಿಶೇಷವಾಗಿ ತಯಾರಿಸುತ್ತಾರೆ. ಹಾರನಹಳ್ಳಿಯ ಕೋಡಿಮಠದ ಶ್ರೀಗಳಾದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಗೌರಮ್ಮನಿಗೆ ಮೂಗುನತ್ತು ತೊಡಿಸುವ ಮೂಲಕ ಜಾತ್ರೆಗೆ ಚಾಲನೆ ಕೊಡುವ ಪದ್ಧತಿ ನಡೆದುಕೊಂಡು ಬರುತ್ತಿತ್ತು. ಇಂದೂ ಕೂಡ ಅದೇ ಸಂಪ್ರದಾಯ ಕೇವಲ ಒಂದು ದಿನದಲ್ಲಿ ಮುಂದುವರಿದು ಜಾತ್ರಾ ಮಹೋತ್ಸವ ನಡೆಯದೇ ನಿಮಜ್ಜನ ಮಾಡಲಾಯಿತು.
ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಆಗಸ್ಟ್ 21 ರಿಂದ ಆಗಸ್ಟ್ 31ರ ತನಕ ಒಂಬತ್ತು ದಿನಗಳ ಕಾಲ ಆಚರಣೆ ಮಾಡುವ ಮೂಲಕ ನಿಮಜ್ಜನ ಮಾಡಲು ನಿರ್ಧಾರ ಮಾಡಿದ್ದರು. ಆದರೆ, ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಜಾತ್ರಾಮಹೋತ್ಸವವನ್ನು ಸಂಪೂರ್ಣವಾಗಿ ನಿಷೇಧ ಮಾಡುತ್ತಿದ್ದೇವೆ ಎಂದು ಮಾಡಳು ಗೌರಮ್ಮ ಭಕ್ತ ಮಂಡಳಿಯ ಅಧ್ಯಕ್ಷ ಶಿವಲಿಂಗಪ್ಪ ಹೇಳಿದ್ದಾರೆ.