ಅರಕಲಗೂಡು: ಅರೆಮಾದನಹಳ್ಳಿ ಮಠದ ಶ್ರೀಗಳಾದ ಶ್ರೀ ಶ್ರೀ ಶ್ರೀ ಶಿವ ಸುಜ್ಞಾನ ಮೂರ್ತಿಯವರು ಗಣೇಶ ಚತುರ್ಥಿಗೆ ಸ್ವ ಹಸ್ತದಿಂದ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಯನ್ನು ತಯಾರಿಸಿದ್ದಾರೆ.
![eco friendly ganesha by sri shiva sugjana murthy](https://etvbharatimages.akamaized.net/etvbharat/prod-images/kn-hsn-ark-01-ganesha-av-kac10024_22082020192900_2208f_1598104740_440.jpeg)
ಪರಿಸರ ಸ್ನೇಹಿ ಮಣ್ಣಿನ ಗಣಪ ಮೂರ್ತಿಯನ್ನು ಸ್ವತಃ ತಾವೇ ತಯಾರಿಸಿ ಆ ಮೂಲಕ ಇತರರಿಗೆ ಮಾದರಿಯೂ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾನಾ ಕಾರಣದಿಂದಾಗಿ ಪರಿಸರ ಹಾಳಾಗುತ್ತಿದೆ. ಜಲಮೂಲಗಳು ಕಲುಷಿತಗೊಳ್ಳುತ್ತಿದೆ. ಸ್ವಚ್ಛ ಪರಿಸರ ಹಾಗೂ ಜಲ ಮೂಲಗಳು ಉಳಿಯಬೇಕಾದರೆ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುವುದು ಅನಿವಾರ್ಯ ಎಂದು ಅವರು ತಿಳಿಸಿದರು.
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ಬಣ್ಣದಿಂದ ತಯಾರಿಸಿರುವ ಗೌರಿ ಗಣೇಶ ಮೂರ್ತಿಗಳನ್ನು ನದಿ, ಹೊಳೆ, ಕೆರೆ, ಬಾವಿ ಹಾಗೂ ಇತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸಿದಾಗ ನೀರು ಕಲುಷಿತಗೊಳ್ಳುತ್ತದೆ. ಇದನ್ನು ತಪ್ಪಿಸಲು ಜೇಡಿ ಮಣ್ಣು ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಸರ್ಜಿಸಬೇಕು. ಈ ಮೂಲಕ ಗಣೇಶ ಚತುರ್ಥಿ ಆಚರಣೆಯನ್ನು ಪರಿಸರಸ್ನೇಹಿಯಾಗಿಸಲು ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದರು.