ಹಾಸನ: ಪೊಲೀಸ್ ಸೇವೆ ಎಂದರೇ ಪವಿತ್ರವಾಗಿದ್ದು. ಸಾರ್ವಜನಿಕರು ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಕರ್ತವ್ಯದಲ್ಲಿ ಮತ್ತೊಬ್ಬರಿಗೆ ಒಳ್ಳೆಯದನ್ನು ಮಾಡಲು ಆಗದಿದ್ದರೂ ಕೆಟ್ಟದನ್ನು ಮಾಡಬೇಡಿ ಎಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ್ ಮರಗೂರು ಸಲಹೆ ನೀಡಿದರು.
ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಕರ್ತವ್ಯದಂತೆ ನಮ್ಮಲ್ಲೂ ಇದ್ದರೂ ಅವರ ಪ್ರತಿಭೆ ಬೆಳಕಿಗೆ ಬರುತ್ತಿಲ್ಲ. ತಮಗೆ ನೀಡಿರುವ ಸೇವೆಯನ್ನು ಆತ್ಮಸಾಕ್ಷಿಯಾಗಿ ಮಾಡಬೇಕು. ಸಮಾಜದಲ್ಲಿ ಯಾವುದಾದರೂ ಒಂದು ಸಣ್ಣ ಘಟನೆ ನಡೆದರೂ ಜನತೆ ಮೊದಲು ಪೊಲೀಸ್ ಠಾಣೆಗೆ ಹೋಗುತ್ತಾರೆ. ನಂತರ ಪ್ರಕರಣ ನ್ಯಾಯಾಲಯಕ್ಕೆ ಬರುತ್ತದೆ. ಪೊಲೀಸ್ ಎಂದರೆ ಸಮಾಜದಲ್ಲಿ ಮಗುವಿನಿಂದ ಹಿಡಿದು ವೃದ್ದರವರೆಗೂ ರಕ್ಷಕರೆಂಬ ಭಾವನೆ ಇದೆ. ಯಾರೂ ಕೂಡ ಮೋಜಿಗಾಗಿ ಪೊಲೀಸ್ ಠಾಣೆಗೆ ಮತ್ತು ಕೋರ್ಟಿಗೆ ಬರುವುದಿಲ್ಲ. ತಮ್ಮ ಹಕ್ಕಿಗೆ ಚ್ಯುತಿ ಬಂದಾಗ ಮಾತ್ರ ರಕ್ಷಣೆಗಾಗಿ ಬರುತ್ತಾರೆ. ಅವರನ್ನು ಮಾನವೀಯತೆಯಲ್ಲಿ ನೋಡಿ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇಂದು ಪೊಲೀಸ್ ಠಾಣೆಗೆ ಇ-ಮೇಲ್ ಮೂಲಕವೂ ನೀಡಬಹುದಾಗಿದೆ. ಒಬ್ಬ ವ್ಯಕ್ತಿಯನ್ನು ನೋಡಿದರೆ ಅನ್ಯಾಯವಾಗಿರುವ ಬಗ್ಗೆ ಸತ್ಯ ಇಲ್ಲವೇ ನಟನೆ ಮಾಡುತ್ತಿರಬಹುದಾ? ಎಂಬುದು ಗೋಚರವಾಗುತ್ತದೆ. ವಂಚಿತನಾಗಿದ್ದರೆ ಆತನಿಂದ ದೂರು ಪಡೆದು ತನಿಖೆ ಮಾಡಿ ನ್ಯಾಯಕೊಡಿಸುವ ಕೆಲಸ ಮಾಡಬೇಕು. ದೂರೇ ಪಡೆಯದಿದ್ದರೆ ಆತನಿಗೆ ನ್ಯಾಯ ಸಿಗುವುದಾದರೂ ಹೇಗೆ ?ಎಂದು ಪ್ರಶ್ನಿಸಿದರು. ಪೊಲೀಸರಿಗೆ ಕೊಡಲಾಗಿರುವ ಕೆಲಸವನ್ನು ನಿಷ್ಟೆಯಿಂದ ಮಾಡಿದರೆ ಜನರು ನಿಮ್ಮನ್ನು ಗೌರವಿಸುತ್ತಾರೆ. ಒಳ್ಳೆಯದನ್ನು ಮಾಡಲು ಸಾಧ್ಯವಾಗದಿದ್ದರೇ ಕೆಟ್ಟದನ್ನು ಮಾಡಲು ಮುಂದಾಗಬೇಡಿ. ಸಾಧ್ಯವಾದಷ್ಟು ಒಳ್ಳೆಯ ಕೆಲಸವನ್ನು ಮಾಡೋಣ ಎಂದು ಕರೆ ನೀಡಿದರು.
ರಾಷ್ಟ್ರೀಯ ಹಾಕಿ ಆಟಗಾರ ಬಿ.ಎಂ. ಶೇಷೇಗೌಡ ಮಾತನಾಡಿ, ಸಾರ್ವಜನಿಕರಿಗೆ ಮೊದಲ ಹೀರೋ ಪೊಲೀಸ್. ಯಾವಾಗಲೂ ಇವರಿಗೆ ಒಂದು ದೊಡ್ಡ ಸೆಲ್ಯೂಟ್ ಇದ್ದೇ ಇರುತ್ತದೆ ಎಂದರು.
ಕ್ರೀಡಾಕೂಟದಲ್ಲಿ ಗೌರವ ರಕ್ಷೆ ಪಡೆದ ನಂತರ ಕ್ರೀಡಾಪಟು ಪೊಲೀಸರಿಂದ ಪಥ ಸಂಚಲನ ನಡೆಸಲಾಯಿತು. ಕ್ರೀಡಾಜ್ಯೋತಿ ಬರಮಾಡಿಕೊಂಡು ಸ್ವಾಗತಿಸಿದರು. ಕೊನೆಯದಾಗಿ ಕ್ರೀಡಾಪಟುಗಳಿಂದ ಪ್ರಮಾಣವಚನ ಸ್ವೀಕರಿಸಿದರು.