ಹಾಸನ/ಹೊಳೆನರಸೀಪುರ: ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಪಟ್ಟಣದ ಹಲವು ಭಾಗಗಳಲ್ಲಿ ಸಂಸದ ಹೆಚ್.ಡಿ. ದೇವೇಗೌಡ, ಸಚಿವ ರೇವಣ್ಣ ಹಾಗೂ ಭವಾನಿ ರೇವಣ್ಣ ಸೇರಿದಂತೆ ಸಾವಿರಾರು ಕಾರ್ಯಕರ್ತರು ಚುನಾವಣಾ ಪ್ರಚಾರ ನಡೆಸಿದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, ನನ್ನ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಅಭ್ಯರ್ಥಿಯಾಗಿ ಘೋಷಿಸುವ ಮೊದಲು ಪಕ್ಷದ ಮುಖಂಡರಾದ ಪಟೇಲ್ ಶಿವರಾಂ, ಶಿವಲಿಂಗೇಗೌಡ ಹಾಗೂ ಹೆಚ್.ಕೆ. ಕುಮಾರಸ್ವಾಮಿ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಂಡಿದ್ದೇನೆ. ಕ್ಷೇತ್ರದಲ್ಲಿ ರೇವಣ್ಣ ಉತ್ತಮ ಕೆಲಸ ಮಾಡಿದ್ದಾನೆ. ನೀವೆಲ್ಲರೂ ಪ್ರಜ್ವಲ್ ರೇವಣ್ಣನನ್ನು ಗೆಲ್ಲಿಸಲು ಪಣತೊಟ್ಟು ನಿಂತಿದ್ದೀರಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಹಳ್ಳಿಯ ರೈತನ ಮಗನಾಗಿ ಹುಟ್ಟಿ ಸುಧೀರ್ಘ ಕಾಲ ರಾಜಕೀಯದಲ್ಲಿ ಹೋರಾಟ ಮಾಡಿ ದೇಶದ ಉನ್ನತ ಹುದ್ದೆ ಅಲಂಕರಿಸಿದ್ದೆ. ಇದೆಲ್ಲ ವಿಧಿ ಆಟ. ಇದೇ ನನ್ನ ಅಂತಿಮ ಚುನಾವಣೆ ಎಂದು ಲೋಕಸಭೆ ಕೊನೆಯ ಕಲಾಪದಲ್ಲಿ ಹೇಳಿದ್ದೆ. ಆದರೆ, ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ನೀವು ಸ್ಪರ್ಧಿಸುವುದು ಅಗತ್ಯವಿದೆ ಎಂದು ಹಲವರು ಒತ್ತಾಯಿಸಿದರು. ಈ ಹಿನ್ನಲೆಯಲ್ಲಿ ಅಂತಿಮವಾಗಿ ತುಮಕೂರು ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕಾಯಿತು ಎಂದು ಮಾಜಿ ಪ್ರಧಾನಿ ತಮ್ಮ ಸ್ಪರ್ಧೆ ಕುರಿತು ತಿಳಿಸಿದರು.