ಸಕಲೇಶಪುರ: ಇನ್ನು ಮುಂದೆಯಾದರೂ ದೇವಸ್ಥಾನ, ಮಸೀದಿ, ಚರ್ಚ್ಗಳನ್ನು ಹೆಚ್ಚಾಗಿ ಕಟ್ಟುವ ಬದಲು ಹೆಚ್ಚು ಹೆಚ್ಚಾಗಿ ಆಸ್ಪತ್ರೆಗಳನ್ನು ಕಟ್ಟಿದರೆ ಜನರ ಜೀವನವನ್ನು ಬಲಿ ಪಡೆಯುತ್ತಿರುವ ಮಾರಕ ರೋಗವಾದ ಕೋವಿಡ್-19 ನಂತಹ ರೋಗಗಳನ್ನು ತಡೆಯಬಹುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತ ದೇವರಾಜು ಹೇಳಿದರು.
ಶುಕ್ರವಾರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಕೋವಿಡ್-19ಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆ ಹಾಗೂ ತಾಲೂಕಿನಲ್ಲಿ ಕೊರೊನಾ ಸೋಂಕಿತರು ಇಲ್ಲ ಎಂದು ಉದಾಸೀನತೆ ಬೇಡ. ಹೊರ ದೇಶ, ಹೊರ ರಾಜ್ಯ ಹಾಗೂ ಇತರೆ ಜಿಲ್ಲೆಯಿಂದ ಬರುವವರ ಮೇಲೆ ಎಚ್ಚರಿಕೆ ವಹಿಸಬೇಕು ಎಂದರು.
ಯಾವುದೇ ವ್ಯಕ್ತಿಯು ಹಸಿವಿನಿಂದ ಸಾಯಬಾರದು. ಅಂತವರು ಕಂಡು ಬಂದರೆ ತಾಲೂಕು ಆಡಳಿತ ಕೂಡಲೇ ಅಂತಹವರಿಗೆ ಪಡಿತರ ವ್ಯವಸ್ಥೆ ಅಥವಾ ಊಟದ ವ್ಯವಸ್ಥೆ ಮಾಡಬೇಕು. ತಾಲೂಕು ಹೆಚ್ಚು ಕೂಲಿ ಕಾರ್ಮಿಕರನ್ನು ಹೊಂದಿದ್ದು, ಎಸ್ಟೇಟ್ಗಳಲ್ಲಿ ಇರುವ ಕೂಲಿ ಕಾರ್ಮಿಕರಿಗೆ ಅಗತ್ಯ ವ್ಯವಸ್ಥೆ ಮಾಡುವ ಜೊತೆಗೆ ಅವರ ಆರೋಗ್ಯದ ಬಗ್ಗೆ ತಪಾಸಣೆಯನ್ನೂ ಕೂಡ ಮಾಡಬೇಕು ಎಂದಿದ್ದಾರೆ.