ಹಾಸನ: ಪರಿಸರಕ್ಕೆ ಮಾರಕವಾಗುವ ನೀತಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ್ದು, ಇದರ ಅಗತ್ಯವಿರಲಿಲ್ಲ ಇದು ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಮಲೆನಾಡು ಜನಪರ ಹೋರಾಟ ಸಮಿತಿಯ ಕಿಶೋರ್ ಕುಮಾರ್ ಟೀಕಿಸಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಸರಳ ಮತ್ತು ಪಾರದರ್ಶಕ ನೀತಿಯನ್ನು ತರುವ ಉದ್ದೇಶ ಎಂದು ಅರಣ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ, ಈ ನೀತಿಯ ಉದ್ದೇಶ ಎದ್ದು ಕಾಣುತ್ತಿದೆ. ಅತ್ಯಂತ ತರಾತುರಿಯಲ್ಲಿ ಸರ್ಕಾರ ಈ ತಿದ್ದುಪಡಿಯನ್ನು ವಿಶ್ವ ಕಂಡರಿಯದಂತಹ ಕೋವಿಡ್ ಮಹಾಮಾರಿ ದುರಂತ ಸಂದರ್ಭದಲ್ಲಿ ಜಾರಿಗೆ ತರುವ ಪ್ರಯತ್ನಕ್ಕೆ ಕೈ ಹಾಕಿದೆ. ವೈರಸ್ ವಿರುದ್ಧ ಸಮರೋಪಾದಿಯಲ್ಲಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಗಮನ ಕೊಡುವ ಸಂದರ್ಭದಲ್ಲಿ ಪರಿಸರಕ್ಕೆ ಮಾರಕವಾಗುವ ನೀತಿಯ ಅವಶ್ಯಕತೆ ಬೇಕಾಗಿತ್ತಾ ಎಂದು ಪ್ರಶ್ನಿಸಿದರು.
ಕರಡು ನೀತಿಯನ್ನು ಕೇಂದ್ರ ಸರ್ಕಾರವು ಪ್ರಕಟಣೆ ಮಾಡಿದ ದಿನಾಂಕದಿಂದ 60 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಆದೇಶ ಮಾಡಿದ್ದು, ಬಹಳಷ್ಟು ಮಂದಿಗೆ ಕರಡು ನೀತಿ ಮಾಹಿತಿ ಇಲ್ಲದೆ ಹಾಗೂ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಒಟ್ಟಿಗೆ ಸೇರಿ ಚರ್ಚಿಸಲು ಸಾಕಷ್ಟು ಕಾಲಾವಕಾಶ ಸಿಗದೆ ಸರಿಯಾದ ಆಕ್ಷೇಪಣೆ ಸಲ್ಲಿಸಲು ಸಾಧ್ಯವಾಗಿರುವುದಿಲ್ಲ ಎಂದು ಆಕ್ಷೇಪಿಸಿದರು.