ಹಾಸನ: ಕ್ಷೇತ್ರದ ಅಭಿವೃದ್ಧಿಯನ್ನು ಶಾಸಕ ಪ್ರೀತಮ್ ಜೆ. ಗೌಡರು ಎಂದೂ ಕಡೆಗಣಿಸಿರುವುದಿಲ್ಲ, ಅಭಿವೃದ್ಧಿ ಮಂತ್ರವೇ ಇವರಿಗೆ ಶ್ರೀರಕ್ಷೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡರು ಇಲ್ಲಿವರೆಗೂ ಹಾಸನ ಗ್ರಾಮಾಂತರ ಭಾಗಕ್ಕೆ 300 ಕೋಟಿ ಹಣ ವಿವಿಧ ಅಭಿವೃದ್ಧಿ ಕೆಲಸಕ್ಕೆ ತಂದಿದ್ದಾರೆ. ಹಾಸನ ನಗರ ಭಾಗಕ್ಕೆ 165 ಕೋಟಿ ರೂ.ಗಳನ್ನು ಒಳ ಚರಂಡಿ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇಷ್ಟೆಲ್ಲಾ ಹಾಸನದಲ್ಲಿ ಅಭಿವೃದ್ಧಿ ಮಾಡಿರುವಂತದ್ದು ಇದ್ದರೂ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ ಸ್ವರೂಪ್ ಸುಳ್ಳು ಆರೋಪವನ್ನು ಶಾಸಕರ ಮೇಲೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಅಭಿವೃದ್ಧಿ ಕೆಲಸ ಮಾಡಲು ಖುದ್ಧಾಗಿ ಶಾಸಕರೇ ಹೋಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಉತ್ತಮ ಬಾಂಧ್ಯವ್ಯ ಇರುವುದರಿಂದ ಅಭಿವೃದ್ಧಿ ಕೆಲಸಕ್ಕೆ ಚಾಲನೆ ಕೊಡಲಾಗುತ್ತಿದೆ ಎಂದು ತಿರುಗೇಟು ನೀಡಿದರು.
ಶಾಸಕ ಪ್ರೀತಮ್ ಜೆ. ಗೌಡರು ಶಿರಾದಲ್ಲಿ ನಡೆಯುವ ಚುನಾವಣೆಯ ಪ್ರಚಾರಕ್ಕಾಗಿ ಹೋಗಿದ್ದಾರೆ. ಇಲ್ಲಿನ ಶಾಸಕರು ಮೈಸೂರು ವಿಭಾಗದ ಪ್ರಭಾರಿ ಕೂಡ ಆಗಿದ್ದಾರೆ. ಎರಡು ಮೂರು ಜಿಲ್ಲೆಯ ಜವಾಬ್ಧಾರಿಯನ್ನು ಕೊಟ್ಟಿದ್ದಾರೆ. ಪಕ್ಷವು ಯಾವ ಜವಾಬ್ಧಾರಿ ಕೊಡುತ್ತದೆ ಅದನ್ನು ನಿಭಾಯಿಸುವುದು ಅವರ ಕರ್ತವ್ಯವಾಗಿರುವುದರಿಂದ ಶಿರಾ ಚುನಾವಣೆಗೆ ಹೋಗಿರುವುದು ಪಕ್ಷ ಕೊಟ್ಟಿರುವ ಜವಾಬ್ಧಾರಿಯಾಗಿದೆ ಎಂದರು. ಈ ಹಿಂದೆಯೂ ಕೂಡ ಕೆ.ಆರ್. ಪೇಟೆ ಚುನಾವಣೆಗೆ ನಮ್ಮ ಶಾಸಕರನ್ನೇ ಪ್ರಮುಖರಾಗಿ ನೇಮಕ ಮಾಡಿದ್ದು, ವಿಜಯೇಂದ್ರ ಮತ್ತು ಪ್ರೀತಮ್ ಜೆ. ಗೌಡರ ಶ್ರಮದಿಂದ ಬಿಜೆಪಿ ಜಯಭೇರಿ ಬಾರಿಸಿರುವುದಾಗಿ ಹೇಳಿದರು.