ಗದಗ : ನಗರದ ಕಲಾ ಮಂದಿರದ ಬಳಿಯ ಬಸ್ ನಿಲ್ದಾಣದ ಟವರ್ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳವನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ. ಟವರ್ನಲ್ಲಿದ್ದ ಹರಿದ ಗಾಳಿಪಟದ ದಾರಕ್ಕೆ ಪಾರಿವಾಳದ ರೆಕ್ಕೆ ಸಿಲುಕಿದ್ದರಿಂದ ಅದು ಹಾರಲಾಗದೆ ಎರಡು ದಿನಗಳಿಂದ ಒದ್ದಾಡುತ್ತಿತ್ತು.
ಇದನ್ನು ಗಮನಿಸಿದ ಯುವಕರು ಹರಸಾಹಸಪಟ್ಟು ಪಕ್ಷಿಯ ಜೀವ ರಕ್ಷಿಸಿದ್ದಾರೆ. ಗಾಳಿಪಟದ ದಾರ ಸಿಲುಕಿದ್ದರಿಂದ ಪಾರಿವಾಳದ ರೆಕ್ಕೆಗೆ ಗಾಯವಾಗಿದ್ದು, ಯುವಕರೇ ಅದಕ್ಕೆ ಚಿಕಿತ್ಸೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ನಗರದಲ್ಲಿ ಬೈಕ್ ಸವಾರನ ಕೈಗೆ ಗಾಳಿಪಟದ ದಾರ ಸಿಕ್ಕಿ ಗಾಯವಾಗಿತ್ತು. ಇನ್ನೋರ್ವ ಬೈಕ್ ಸವಾರನ ಕತ್ತಿಗೆ ದಾರ ಸುತ್ತಿಕೊಂಡಿತ್ತು.
ಓದಿ : ಬಿಡಾಡಿ ದನಗಳಿಗೆ ಆಸರೆಯಾದ ಆಧುನಿಕ 'ಬಾಪು': ಗೋಶಾಲೆ ತೆರೆದ ಮುದ್ದೇಬಿಹಾಳ ರೈತ
ಕೆಲವೆಡೆ ವಿದ್ಯುತ್ ತಂತಿಗಳಿಗೆ ದಾರ ಸುತ್ತಿಕೊಂಡು ಶಾರ್ಟ್ ಸರ್ಕ್ಯೂಟ್ ಆಗಿದ್ದೂ ಇದೆ. ಗಾಳಿಪಟದ ದಾರ ಅಲ್ಲಲ್ಲಿ ಸುತ್ತಿಕೊಂಡು ಪ್ರಾಣಿ, ಪಕ್ಷಿಗಳು ಮಾತ್ರವಲ್ಲದೆ ಮನುಷ್ಯರ ಪ್ರಾಣಕ್ಕೂ ಕಂಟಕವಾಗುತ್ತಿದೆ. ಹಾಗಾಗಿ, ಗಾಳಿಪಟದ ಹಾರಿಸುವುದಕ್ಕೆ ನಗರಸಭೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.