ಗದಗ: ಮುಂಬೈನಿಂದ ನಗರಕ್ಕೆ ರೈಲಿನಲ್ಲಿ 107 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ. ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರಿಗೆಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಕ್ರೀನಿಂಗ್ ಮಾಡಿ ನಂತರ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿದರು.
5 ಬಸ್ಗಳ ಮೂಲಕ ಕ್ವಾರಂಟೈನ್ ಕೇಂದ್ರಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲಾಯಿತು. ಗದಗ ಜಿಲ್ಲೆ, ಹುಬ್ಬಳ್ಳಿ ಸೇರಿ ವಿವಿಧ ಜಿಲ್ಲೆಗಳ ಜನ ಈ ರೈಲಿನಲ್ಲಿ ಆಗಮಿಸಿದ್ದರು. ಅವರಲ್ಲಿ ಸ್ವಂತ ವಾಹನ ಇದ್ದವರನ್ನು ಆಯಾ ಜಿಲ್ಲೆಗೆ ಜಿಲ್ಲಾಡಳಿತ ಕಳುಹಿಸಿಕೊಟ್ಟಿದೆ.
ಇದೇ ಲಾಕ್ಡೌನ್ಗೆ ಸಿಲುಕಿ ಮುಂಬೈನಿಂದ ಹುಬ್ಬಳ್ಳಿಗೆ ಬರಲು ಪರದಾಡಿದ್ದ ಕುಟುಂಬವೊಂದು ನಗರಕ್ಕೆ ಬಂದಿದೆ. ಮುಂಬೈನಿಂದ ಬಂದ ಪತ್ನಿ ಹಾಗೂ ಮಕ್ಕಳನ್ನು ಕಂಡ ವ್ಯಕ್ತಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು.