ಗದಗ : ಪಿಯು ಬೋರ್ಡ್ ಎಡವಟ್ಟಿನಿಂದಾಗಿ ಫೇಲ್ ಆಗಿದ್ದ ಕೊಣ್ಣೂರ ವಿದ್ಯಾರ್ಥಿಯನ್ನು ಕೊನೆಗೂ ಪಾಸ್ ಮಾಡಲಾಗಿದೆ.

ಈ ಕುರಿತು ಇಂದು ಬೆಳಗ್ಗೆ ಈಟಿವಿ ಭಾರತ "ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದ ವಿದ್ಯಾರ್ಥಿ ಫೇಲ್: ಪಿಯು ಮಂಡಳಿ ಎಡವಟ್ಟು" ಎಂಬ ಶೀರ್ಷಿಕೆ ಅಡಿ ಸುದ್ದಿ ಪ್ರಸಾರ ಮಾಡಿತ್ತು. ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೂಗೌಡ ಕೆಂಚನಗೌಡರು, ಪಿಯು ಬೋರ್ಡ್ ಪ್ರಭಾರಿ ಉಪನಿರ್ದೇಶಕ ಕೃಷ್ಣ ಪ್ರಸಾದ್ ಅವರ ಗಮನಕ್ಕೆ ಈ ಲೋಪವನ್ನ ತಂದಿದ್ರು.
ಕೂಡಲೇ ತಪ್ಪನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದರು. ಸದ್ಯ ಪಿಯು ಬೋರ್ಡ್ ವಿದ್ಯಾರ್ಥಿ ಶಬ್ಬೀರ್ ಖಾಜಿಯನ್ನು ಪಾಸ್ ಮಾಡಲಾಗಿದೆ. ಈ ಮೂಲಕ ಶಬ್ಬೀರ್ ಒಟ್ಟು 526 ಅಂಕಗಳಿಸಿದ್ದಾರೆ. ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಕೆಇಎಸ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಓದಿರುವ ಶಬ್ಬೀರ್ ಪಿಯುಸಿ ಫಲಿತಾಂಶದಿಂದ ನಿಬ್ಬೆರಗಾಗಿದ್ದರು.
ಕಾಲೇಜಿಗೆ ಪ್ರಥಮ ಸ್ಥಾನ ಬಂದರೂ ಸಹಿತ ಆತನಿಗೆ ಇಂಗ್ಲಿಷ್ ವಿಷಯದಲ್ಲಿ ಕೇವಲ 24 ಅಂಕ ನೀಡಿ, ಫೇಲ್ ಮಾಡಲಾಗಿತ್ತು. ಹಾಗಾಗಿ ಆತ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿ, ಉತ್ತರ ಪತ್ರಿಕೆ ತರಿಸಿಕೊಂಡು ನೋಡಲಾಯಿತು. ಪಾಸ್ ಆಗಿದ್ದರೂ ಸಹ ಫೇಲ್ ಮಾಡಲಾಗಿತ್ತು. ಅನಿವಾರ್ಯವಾಗಿ ಮಾಧ್ಯಮದ ಎದುರು ತನಗಾದ ಅನ್ಯಾಯವನ್ನು ಪ್ರಶ್ನಿಸಿದ್ದನು.
ಈಟಿವಿ ಭಾರತ ವರದಿಯಿಂದ ಎಚ್ಚೆತ್ತ ಪಿಯು ಬೋರ್ಡ್ ವಿದ್ಯಾರ್ಥಿ ಶಬ್ಬೀರ್ನನ್ನು ಪಾಸ್ ಮಾಡಿದೆ. ಆತನ ಮರು ಮೌಲ್ಯಮಾಪನಕ್ಕೆ ಮಾಡಿರುವ ಸುಮಾರು 3 ಸಾವಿರ ರೂಪಾಯಿ ಖರ್ಚನ್ನು ಪಿಯು ಮಂಡಳಿ ನನಗೆ ವಾಪಸ್ ಬರಿಸಬೇಕು ಅಂತಾ ಮನವಿ ಮಾಡಿಕೊಂಡಿದ್ದಾರೆ ಶಬ್ಬೀರ್.
ಇಂಗ್ಲಿಷ್ ವಿಷಯದಲ್ಲಿ ಸುಮಾರು 6 ಅಂಕಗಳು ಬರಬೇಕಿದೆ. ಅದನ್ನೂ ಸಹ ಸರಿಪಡಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಈಟಿವಿ ಭಾರತಗೆ ವಿದ್ಯಾರ್ಥಿ ಮತ್ತು ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ ಧನ್ಯವಾದ ತಿಳಿಸಿದ್ದಾರೆ.