ಗದಗ: ಅಕ್ರಮ ಮರಳು ಗಣಿಗಾರಿಕೆ ವಿಚಾರವಾಗಿ ಗದಗದ 9 ಜನ ಅಧಿಕಾರಿಗಳಿಗೆ ರಾಜ್ಯ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಅಕ್ರಮ ಮರಳು ಗಣಿಗಾರಿಕೆ ಕುರಿತು ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಹೈಕೋರ್ಟ್ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೋಗನೂರು, ನಾಗರಮಡುವು, ಅಂಕಲಿ ಗ್ರಾಮಗಳಲ್ಲಿನ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಶಿರಹಟ್ಟಿ ತಹಶಿಲ್ದಾರ್ ಹಾಗೂ ಸಿಪಿಐ ಸೇರಿ ವಿವಿಧ ಇಲಾಖೆಯ 13 ಅಧಿಕಾರಿಗಳ ಪೈಕಿ 9 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಈ ಬಗ್ಗೆ ಮುಂಡರಗಿಯ ರೈತಮುಖಂಡ ವಿಠಲ್ ಗಣಾಚಾರಿ ಸೇರಿ ಗದಗ ಜಿಲ್ಲೆಯ ಬೇರೆಬೇರೆ ಗ್ರಾಮಗಳ 22 ಜನರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಕುರಿತು ಅರ್ಜಿದಾರರ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿಗಳಾದ ಇ.ಎಸ್.ಇಂದ್ರೇಶ್ ಜೂನ್ 08ರಂದು ಸರ್ಕಾರದ ಅಡ್ವೊಕೇಟ್ ಜನರಲ್ ಅವರಿಗೆ ತುರ್ತು ನೊಟೀಸ್ ನೀಡಿದ್ದು, ನೋಟಿಸ್ ಮೂಲಕ ಶಿರಹಟ್ಟಿ ತಹಶಿಲ್ದಾರ್, ಸಿಪಿಐ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ, ಗಣಿ ಇಲಾಖೆ ನಿರ್ದೇಶಕರು, ಜಿಲ್ಲಾ ಮರಳು ಟಾಸ್ಕ್ ಫೋರ್ಸ್ ಕಮೀಟಿ, ಗಣಿ ಇಲಾಖೆಯ ಬಳ್ಳಾರಿಯ ಹೆಚ್ಚುವರಿ ನಿರ್ದೇಶಕರು, ಗದಗಿನ ಹಿರಿಯ ಭೂವಿಜ್ಞಾನಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಉಪವಿಭಾಗಾಧಿಕಾರಿ, ಕೋಗನೂರು ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿದಂತೆ ಒಟ್ಟು 13 ಅಧಿಕಾರಿಗಳ ಪೈಕಿ 9 ಇಲಾಖೆಗೆ ನೋಟಿಸ್ ಜಾರಿ ಮಾಡಲಾಗಿದೆ.
ಅದರಲ್ಲಿ ಶಿರಹಟ್ಟಿಯ ತಹಶಿಲ್ದಾರ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ಗೆ ಜೂ. 22ರಂದು ಬೆಳಗ್ಗೆ ಪ್ರಕರಣದ ಕುರಿತು ಸೂಕ್ತ ದಾಖಲಾತಿಯೊಂದಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. 2019ರ ಫೆ.12ರಂದು ಅರ್ಜಿದಾರರು ಅಕ್ರಮ ಮರಳು ಗಣಿಗಾರಿಕೆ ಕುರಿತು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಈ ಕುರಿತು ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ಅರ್ಜಿ ಪರಿಶೀಲಿಸಿ, ಅಗತ್ಯವಿದ್ದರೆ ಈ ತಿಂಗಳ 22ರ ಒಳಗಾಗಿ ಖುದ್ಧಾಗಿ ಸ್ಥಳ ಪರಿಶೀಲಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸೂಚಿಸಿದೆ.