ಗದಗ: ಅನಾಥ ಮಗುವೊಂದು ವಿದೇಶಿ ದಂಪತಿಯ ಮಡಿಲು ಸೇರಿದ ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ಗದಗ ಜಿಲ್ಲೆ ಸಾಕ್ಷಿಯಾಗಿದೆ.
ಹೌದು, ನಗರದ ಬೆಟಗೇರಿಯ ಹೆಲ್ತ್ ಕ್ಯಾಂಪನ ಸೇವಾಭಾರತಿ ಟ್ರಸ್ಟ್ ನ ಅಮೂಲ್ಯ ದತ್ತು ಕೇಂದ್ರ ಆಯೋಜಿಸಿದ್ದ ದತ್ತು ಪೂರ್ವ ಪೋಷಕತ್ವ ಕಾರ್ಯಕ್ರಮದಲ್ಲಿ ಈ ಅಪರೂಪದ ಕಾರ್ಯ ನಡೆದಿದೆ.
ಹೆತ್ತವರಿಗೆ ಬೇಡವಾದ ಕಂದಮ್ಮಗಳನ್ನು ಬೆಳೆಸಿ ಪೋಷಿಸುವ ಅಮೂಲ್ಯ ಕೆಲಸವನ್ನು ಈ ದತ್ತು ಕೇಂದ್ರ ಮಾಡ್ತಿದ್ದು, ಕೊಪ್ಪಳದ ಗವಿಸಿದ್ದೇಶ ಅನ್ನೋ ಮಗುವನ್ನು ಇಟಲಿ ದಂಪತಿ ದತ್ತು ತೆಗೆದುಕೊಂಡಿದ್ದಾರೆ. ಇಟಲಿಯ ಮಾಟಿಯೋ ಬರ್ಬೆರಾ, ಬ್ರೂನಾ ಕಾರ್ಮೆಲಾ ಅನ್ನೋ ಇಟಲಿ ಕುಟುಂಬ ಈ ಗವಿಸಿದ್ದೇಶನನ್ನು ದತ್ತು ಪಡೆದಿದ್ದಾರೆ.
ಕುತ್ತಿಗೆ ಭಾಗದಲ್ಲಿ ಕೊಂಚ ನರ ದೌರ್ಬಲ್ಯ ಕಾಣಿಸಿಕೊಂಡಿದ್ದು, ಮಗುವನ್ನು ಸ್ವದೇಶಿಗರು ದತ್ತು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ ವಿದೇಶಿ ದಂಪತಿ ಗವಿಸಿದ್ದೇಶನನ್ನು ದತ್ತು ತೆಗೆದುಕೊಳ್ಳೋ ಮೂಲಕ ತಾಯಿ ಹೃದಯದ ಆಂತರ್ಯವನ್ನು ಮೆರೆದಿದ್ದಾರೆ. ಕರುಳಬಳ್ಳಿಯನ್ನು ಎಸೆದು ಹೋಗಿದ್ದ ಮಹಿಳೆಯ ಪುತ್ರನೋರ್ವ ಅಮೂಲ್ಯ ದತ್ತು ಸಂಸ್ಥೆಯ ಮೂಲಕ ವಿದೇಶಕ್ಕೆ ತೆರಳುತ್ತಿರುವುದು ಸಂಸ್ಥೆಯ ಕಾರ್ಯಕರ್ತರಲ್ಲಿ ಸಂಸತ ತಂದಿದೆ.
ಇನ್ನು, ಗವಿಸಿದ್ದೇಶನನ್ನು ಸಂಸ್ಥೆಯವರು ವಿದೇಶಿ ದಂಪತಿಯ ಮಡಿಲಿಗೆ ಹಾಕಿದಾಗ ಸಂಸ್ಥೆಯ ಕಾರ್ಯಕರ್ತರ ಕಣ್ಣಾಲಿಗಳು ತುಂಬಿಬಂದವು. ದತ್ತು ಪಡೆದ ವಿದೇಶಿ ದಂಪತಿ ಗವಿಸಿದ್ದೇಶ ಅನಾಥ ಮಗುವಲ್ಲ. ಅವನು ನಮ್ಮ ಪ್ರೀತಿಯ ಪುತ್ರ. ಆತನನ್ನು ಉತ್ತಮ ನಾಗರಿಕನನ್ನಾಗಿ ಮಾಡೋ ಮೂಲಕ ಭಾರತ ಮತ್ತು ಇಟಲಿ ದೇಶದ ಸಾಂಸ್ಕೃತಿಕ ಕೊಂಡಿಯಾಗಿ ಬೆಳೆಸುತ್ತೇವೆ. ಎರಡೂ ದೇಶಗಳ ಬಾಂಧವ್ಯ ಬೆಸೆಯುವಂತ ರಾಯಭಾರಿಯನ್ನಾಗಿ ಮಾಡುತ್ತೇವೆ ಎಂದಿದ್ದಾರೆ.