ಹುಬ್ಬಳ್ಳಿ: ನಾಡಿನ ಸುಪ್ರಸಿದ್ಧ ಹಿರಿಯ ಸಾಹಿತಿ, ಹೆಸರಾಂತ ಪತ್ರಕರ್ತ, ಪಾಪು ಎಂದೇ ನಾಡಿನಲ್ಲಿ ಚಿರಪರಿಚಿತರಾಗಿದ್ದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ನಿಧನರಾಗಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಹಲವು ದಿನಗಳ ಹಿಂದೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಾಹಿತಿಯಾಗಿ, ಪತ್ರಕರ್ತರಾಗಿ, ಕನ್ನಡದ ಹೋರಾಟಗಾರರಾಗಿ ಪಾಟೀಲ ಪುಟ್ಟಪ್ಪನವರು ರಾಜ್ಯದಲ್ಲಿ ಗುರುತಿಸಿಕೊಂಡಿದ್ದರು. ವಿಶ್ವವಾಣಿ, ಪ್ರಪಂಚ ಎನ್ನುವ ಪತ್ರಿಕೆಗಳನ್ನು ನಡೆಸಿ ಪತ್ರಿಕೋದ್ಯಮಿಯಾಗಿಯೂ ಅವರು ಸಾಕಷ್ಟು ಹೆಸರು ಮಾಡಿದ್ದರು.
ಹಾವೇರಿ ಜಿಲ್ಲೆಯ ಕುರಬಗೊಂಡ ಗ್ರಾಮದಲ್ಲಿ ಸಿದ್ಧಲಿಂಗಪ್ಪ ಮತ್ತು ಮಲ್ಲಮ್ಮ ಎಂಬ ದಂಪತಿಗ 1921ರ ಜನವರಿ 14ರಂದು ಜನಿಸಿದ ಪಾಪು ಹಲಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಬ್ಯಾಡಗಿ, ಹಾವೇರಿ ಹಾಗೂ ಧಾರವಾಡದಲ್ಲಿ ಪ್ರೌಢ ಶಿಕ್ಷಣ ಪಡೆದರು.
ಕರ್ನಾಟಕ ರಾಜ್ಯೋತ್ಸವ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ, ಟಿಎಸ್ಆರ್ ಪ್ರಶಸ್ತಿ, ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿ ಇವರಿಗೆ ಸದ್ದಿವೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.