ಧಾರವಾಡ: ನಗರದಲ್ಲಿ ಕಬ್ಬು ಬೆಳೆಗಾರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದರು ಉರುಳುಸೇವೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಸೋಮವಾರದಿಂದಲೇ ಧರಣಿ ಆರಂಭಿಸಿರುವ ಕಬ್ಬು ಬೆಳೆಗಾರರು ಇಂದು ಜಿಲ್ಲಾಧಿಕಾರಿ ಕಚೇರಿಯಿಂದ ಉಳವಿ ಬಸವೇಶ್ವರ ಸರ್ಕಲ್ ವರೆಗೂ ಉರುಳುಸೇವೆ ಮಾಡಿ ಬಳಿಕ ಅಲ್ಲಿಂದ ಅರೆ ಬೆತ್ತಲೆಯಾಗಿ ಡಿಸಿ ಕಚೇರಿಗೆ ಆಗಮಿಸಿ ಧರಣಿ ಮುಂದುವರೆಸಿದ್ದಾರೆ. ಇನ್ನು, ಪ್ರತಿಭಟನಾ ಸ್ಥಳಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಕ್ಕರೆ ಸಚಿವ ಮುನೇನಕೊಪ್ಪ ಅವರು ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಯಚೂರಿಗೆ ಹೋಗಿದ್ದು, ಅನಾನುಕೂಲತೆ ಇರುವುದರಿಂದ ಧರಣಿ ಸ್ಥಳಕ್ಕೆ ಬರಲು ಆಗಿಲ್ಲ. ರಾಯಚೂರಿನಿಂದ ಹಿಂತಿರುಗಿದ ನಂತರ ಇಲ್ಲಿಗೆ ಭೇಟಿ ನೀಡಲಿದ್ದಾರೆ. ಧರಣಿ ಕುಳಿತವರನ್ನು ಭೇಟಿ ಮಾಡಿ ಅವರ ಬೇಡಿಕೆ ಮತ್ತು ಸಮಸ್ಯೆಗಳನ್ನು ಆಲಿಸುವುದು ಸರ್ಕಾರದ ಜವಾಬ್ದಾರಿ. ಅದನ್ನು ಎಲ್ಲ ಸಚಿವರು ಮಾಡ್ತಾರೆ ಎಂದರು.
ಇನ್ನು, ಕಬ್ಬು ಬೆಳೆಗಾರರು ಎಫ್ಆರ್ಪಿ ಬಗ್ಗೆ ಮನವಿ ಮಾಡಿದ್ದು, ಶಾಸಕರು ಮತ್ತು ಸಚಿವರು, ಸಿಎಂ ಅವರನ್ನು ಭೇಟಿ ಮಾಡಿ ಕಬ್ಬು ಬೆಳೆಗಾರರ ಬೇಡಿಕೆ ಬಗ್ಗೆ ಚರ್ಚೆ ನಡೆಸುತ್ತಾರೆ. ಸಮಸ್ಯೆ ಹೇಗೆ ಬಗೆಹರಿಸಬೇಕು ಎಂದು ತೀರ್ಮಾನ ಮಾಡುತ್ತೇವೆ. ನಾನು ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ವಾಪಸ್ ಪಡೆಯಲು ಮನವಿ ಮಾಡಿದ್ದೇನೆ, ಅವರು ಧರಣಿ ವಾಪಸ್ ಪಡೆಯಬಹುದು ಎಂಬ ಆಶಾಭಾವನೆ ಇದೆ. ಸಾಮಾನ್ಯವಾಗಿ ಬೇಡಿಕೆಗಳು ಇದ್ದಾಗ ಸಭೆ ಮಾಡಲಾಗುತ್ತೆ. ಎಲ್ಲವೂ ಸಮನ್ವಯ ಆಗಬೇಕು, ಚರ್ಚೆ ಪೂರ್ಣ ಆಗಿಲ್ಲ. ಹೀಗಾಗಿ ಅದರ ನಿರ್ಧಾರ ಹೊರಗೆ ಬಂದಿಲ್ಲ, ಆದಷ್ಟು ಬೇಗ ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಪರಿಹಾರ ಹುಡುಕುತ್ತೆವೆ. ಈ ಬಗ್ಗೆ ಎಲ್ಲರೂ ಊಹಾಪೋಹಗಳು ಮಾತನಾಡಿದರೆ ನಾನು ಏನು ಮಾಡಲಿ, ಸಿಎಂ ಯಾವುದೇ ವಿಚಾರವನ್ನು ತಲೆಯಲ್ಲಿ ಇಟ್ಟುಕೊಂಡು ಆಡಳಿತ ಮಾಡುತ್ತಿಲ್ಲ, ಅವರು ರೈತರ ಪರ ಇದ್ದಾರೆ ಎಂದರು.
ಇನ್ನು, ಧರಣಿ ಕುಳಿತಿರುವ ಕಬ್ಬು ಬೆಳೆಗಾರರನ್ನು ಹಾಲಪ್ಪ ಆಚಾರ್ ಮನವೊಲಿಸಲು ಯತ್ನಿಸಿದರೂ, ಸ್ಥಳಕ್ಕೆ ಸಕ್ಕರೆ ಸಚಿವರು ಆಗಮಿಸುವವರೆಗೆ ಧರಣಿ ವಾಪಸ್ ಪಡೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಕಬ್ಬು ಬೆಳೆಗಾರರ ಪ್ರತಿಭಟನೆ: ಧಾರವಾಡ ಡಿಸಿ ಕಚೇರಿಯಲ್ಲಿ ಅಹೋರಾತ್ರಿ ಧರಣಿ