ಹುಬ್ಬಳ್ಳಿ/ಧಾರವಾಡ : ಜಿಲ್ಲೆಯ ನವಲಗುಂದ, ಕುಂದಗೋಳ, ಧಾರವಾಡ ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ ಕಡಲೆ ಬಿತ್ತನೆ ಬೀಜದ ಕೊರತೆ ಕಾಡುತ್ತಿದೆ.
ರಾಜ್ಯ ಸರ್ಕಾರ ರೈತ ಸಂಪರ್ಕ ಕೇಂದ್ರದಲ್ಲಿ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಇದು ರೈತರಿಗೆ ಕಿರಿಕಿರಿ ತಂದಿದೆ. ಯಾವುದೇ ಬೀಜ ಖರೀದಿಗೆ ಆನ್ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕಿದೆ. ಆದರೆ, ರೈತ ಸಂಪರ್ಕ ಕೇಂದ್ರದಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದೆ ಎಂದು ರೈತರು ಗೋಳಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ 1,75,407 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಗುರಿ ಇರಿಸಿದೆ. ಅದರಲ್ಲಿ 87,220 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೀಜ ಬಿತ್ತನೆಯ ಗುರಿ ಹೊಂದಲಾಗಿದೆ. ಹೀಗಾಗಿ, ರೈತರು ನಿತ್ಯ ರೈತ ಸಂಪರ್ಕ ಕೇಂದ್ರದ ಎದುರು ಸರತಿ ಸಾಲಿನಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ನಿಂತು ಬೀಜಕ್ಕಾಗಿ ಅಲೆದಾಟ ನಡೆಸುತ್ತಿದ್ದಾರೆ.
![server problem for Buy seeds in hubballi](https://etvbharatimages.akamaized.net/etvbharat/prod-images/kn-hbl-02-bittane-bijajje-server-problem-pkg-ka10025_18102021174429_1810f_1634559269_1008.jpg)
ಪ್ರತಿಯೊಬ್ಬ ರೈತನಿಗೆ 4 ಪಾಕೇಟ್ ಬೀಜ ನೀಡಲಾಗುತ್ತಿದೆ. ಎಲ್ಲ ರೈತರಿಗೆ ಸರಿಯಾಗಿ ಕಡಲೆ ಬೀಜ ಪೂರೈಕೆ ಆಗುತ್ತಿಲ್ಲ. ಇದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನು ಕೇಳಿದರೆ, ಜಿಲ್ಲೆಯಲ್ಲಿ ಈ ರೀತಿ ಸರ್ವರ್ ಸಮಸ್ಯೆ ಇಲ್ಲ ಎನ್ನುತ್ತಾರೆ.
ಈ ಬಾರಿ ಸರಿಯಾದ ಮಳೆ ಆಗಿದ್ದರಿಂದ ಭೂಮಿ ತೇವಾಂಶ ಹೊಂದಿದೆ. ಸಮಯಕ್ಕೆ ಸರಿಯಾಗಿ ಬೀಜ ಸಿಕ್ಕರೆ ಬಿತ್ತನೆ ಮಾಡುತ್ತಾರೆ. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಬಿತ್ತನೆ ಬೀಜ ಸಿಗದಂತಾಗಿದೆ.
ಓದಿ: ಶಿಕ್ಷಕರಿಗೆ ಗುಡ್ ನ್ಯೂಸ್.. ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಶೀಘ್ರದಲ್ಲೇ ದಿನಾಂಕ ಪ್ರಕಟ..