ಹುಬ್ಬಳ್ಳಿ: ಸಾರಿಗೆ ಬಸ್ ನಿರ್ವಾಹಕನಿಗೆ ಪ್ರಯಾಣಿಕರು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ನಡೆದಿದೆ. ನಗರದ ಗ್ರಾಮೀಣ ಸಾರಿಗೆ ಘಟಕದ ದೇವೆಂದ್ರಪ್ಪ ಕುರಹಟ್ಟಿ ಹಲ್ಲೆಗೊಳಗಾದ ವ್ಯಕ್ತಿ.
ನವೆಂಬರ್ 18ರಂದು ಹುಬ್ಬಳ್ಳಿಯಿಂದ ತರ್ಲಘಟ್ಟಕ್ಕೆ ಪ್ರಯಾಣಿಸುವ ಬಸ್ಗೆ ಬಿಡನಾಳಕ್ರಾಸ್ ಬಳಿಯಿಂದ ಮಲ್ಲಿಕಾರ್ಜುನ ಸವಣೂರು ಮತ್ತು ಮಂಜುನಾಥ ಸೊಪ್ಪಿನಮಠ ಎಂಬವರು ಹತ್ತಿದ್ದರು. ಇಬ್ಬರು ಬಸ್ಸಿನಲ್ಲಿ ಆಸನ ಖಾಲಿಯಿದ್ದರೂ ಕೂರದೇ, ಮೆಟ್ಟಿಲಿ(ಫುಟ್ಬೋರ್ಡ್)ನಲ್ಲಿ ನಿಂತಿದ್ದರಂತೆ. ಈ ವೇಳೆ ಒಬ್ಬನ ಚಪ್ಪಲಿ ಕೆಳಗೆ ಬಿದ್ದಿದ್ದು, ಬಸ್ ನಿಲ್ಲಿಸುವಂತೆ ನಿರ್ವಾಹಕ ಮತ್ತು ಚಾಲಕನಿಗೆ ಅವಾಚ್ಯ ಪದದಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಲ್ಲದೇ 8-10 ಜನರ ಗುಂಪು ಕಂಡಕ್ಟರ್ ಮೇಲೆ ಹಲ್ಲೆ ಮಾಡಿ, ಎಟಿಎಂ, ಮೊಬೈಲ್, ನಗದು ದೋಚಿದ್ದಾರೆ. ಜೊತೆಗೆ ಟಿಕೆಟ್ ಮಷಿನ್ ಒಡೆದು ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಾಯಗೊಂಡ ನಿರ್ವಾಹಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಟಿಕೆಟ್ ಕೇಳಿದ್ದಕ್ಕೆ ಯುವಕನ ಮೇಲೆ ಹಲ್ಲೆ: ಬಸ್ ಕಂಡಕ್ಟರ್ ವಿರುದ್ಧ ಆರೋಪ