ಧಾರವಾಡ: ಧಾರವಾಡ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮಸ್ಥರಿಗೆ, ವಿವಿಧ ರೀತಿಯ ಸಾಮುದಾಯಿಕ ಹಾಗೂ ವೈಯಕ್ತಿಕ ಉದ್ಯೋಗ ಕಲ್ಪಿಸಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೂಲಿ ಕಾರ್ಮಿಕರಿಗೆ ಅಗತ್ಯ ಸಮಯದಲ್ಲಿ ನೆರವಾಗಿದೆ.
ಹಳೇ ತೇಗೂರ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ 42 ಕೂಲಿ ಕಾರ್ಮಿಕರು, ತಡಕೋಡ ಗ್ರಾಮದ ಜೈನರ ಕೆರೆ ಹೂಳೆತ್ತುವುದಕ್ಕೆ 112, ಡೋರಿ ಗ್ರಾಮದ ದೊಡ್ಡಕೆರೆ ಹೂಳೆತ್ತೆಲು 60 ಜನ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಲೋಕೂರ ಮತ್ತು ಕನಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದನಮಟ್ಟಿ ಹಾಗೂ ಕವಲಗೇರಿ ಗ್ರಾಮಗಳ ರೈತರ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಾಣ, ಬದುಗಳ ನಿರ್ಮಾಣ, ಪುಡಕಲಕಟ್ಟಿ, ಕರಡಿಗುಡ್ಡ ಗ್ರಾಮಗಳ ರೈತರ ಜಮೀನುಗಳಲ್ಲಿ ಬದುಗಳ ನಿರ್ಮಾಣ ಮತ್ತು ಬೋಗೂರು ಸ್ಮಶಾನದಲ್ಲಿ, ಮುದಿಕೊಪ್ಪ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವ ಅರಣ್ಯೀಕರಣ ಕಾಮಗಾರಿಗಳು ಕೂಲಿ ಕಾರ್ಮಿಕರಿಂದ ನಡೆಯುತ್ತಿವೆ. ತಡಕೋಡ, ಬೆಣಚಿ ಹಾಗೂ ಕಡಬಗಟ್ಟಿ ಗ್ರಾಮಗಳಲ್ಲಿ ಕಾಲುವೆ ಹೂಳೆತ್ತುವ ಕಾಮಗಾರಿ ನಡೆದಿದೆ.
ಸರ್ಕಾರದ ಹೊಸ ಆದೇಶದಂತೆ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕೂಲಿ ಕಾರ್ಮಿಕರಿಗೆ ನಿತ್ಯ 275 ರೂ. ಗಳನ್ನು ಕೂಲಿ ನೀಡಲಾಗುತ್ತಿದೆ. ಪ್ರತಿ ಆರ್ಥಿಕ ಸಾಲಿನಲ್ಲಿ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ನೂರು ಮಾನವ ದಿನಗಳ ಉದ್ಯೋಗ ನೀಡಲು ಸರ್ಕಾರ ಸೂಚಿಸಿದೆ. ಅದರಂತೆ ಜಮೀನು ಹೊಂದಿರುವ ರೈತರಿಗೆ ಅವರ ಹೊಲಗಳಲ್ಲಿಯೇ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಅರಣ್ಯೀಕರಣಕ್ಕೆ ಅವಕಾಶ ಕಲ್ಪಿಸಿ ಉದ್ಯೋಗ ನೀಡಲಾಗುತ್ತಿದೆ.
ಜಮೀನು ರಹಿತ ಹಾಗೂ ಉದ್ಯೋಗ ಬಯಸುವ ಕೂಲಿ ಕಾರ್ಮಿಕರಿಗೆ ಕೆರೆ, ಕಾಲುವೆ ಹೂಳೆತ್ತುವ ಹಾಗೂ ಅರಣ್ಯೀಕರಣ ಕಾಮಗಾರಿಗಳ ಮೂಲಕ ಉದ್ಯೋಗ ನೀಡಲಾಗುತ್ತಿದೆ ಎಂದು ಕನಕೂರು ಗ್ರಾಮ ಪಂಚಾಯತ್ ಪಿಡಿಒ ಜಗದೀಶ .ಎಂ. ಕೊಟೂರು ತಿಳಿಸಿದ್ದಾರೆ. ಇದೇ ವೇಳೆ, ಸಾಮಾಜಿಕ ಅಂತರದ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದರು.