ಧಾರವಾಡ: ಕೋವಿಡ್ ತಪಾಸಣೆಗಾಗಿ ಗಂಟಲು ದ್ರವ ಸಂಗ್ರಹಿಸಲು ಜಿಲ್ಲಾಡಳಿತ ಮೊಬೈಲ್ ವಾಹನಗಳನ್ನು ರೂಪಿಸಿದೆ. ನಾಳೆ ಹುಬ್ಬಳ್ಳಿಯ ನಾಲ್ಕು ಹಾಗೂ ಧಾರವಾಡದ ಎರಡು ಸ್ಥಳಗಳಲ್ಲಿ ಮೊಬೈಲ್ ವಾಹನ ಲಭ್ಯವಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ನಾಳೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4.30ರವರೆಗೆ ಹುಬ್ಬಳ್ಳಿಯ ಈದ್ಗಾ ಮೈದಾನ, ನೆಹರು ಕ್ರೀಡಾಂಗಣ, ಮಹಾನಗರ ಪಾಲಿಕೆ ಝೋನಲ್ 10 ರ ( ಹಳೆಹುಬ್ಬಳ್ಳಿ) ಕಚೇರಿ ಹತ್ತಿರ, ಸಿದ್ದಾರೂಡ ಮಠದ ಹತ್ತಿರ ವಾಹನ ಲಭ್ಯವಿದೆ. ಹಾಗೂ ಧಾರವಾಡದ ಕಲಾಭವನದ ಹತ್ತಿರ, ಚನ್ನಬಸವೇಶ್ವರ ನಗರದ ಲಿಂಗಾಯತ ಭವನದ ಹತ್ತಿರ ಗಂಟಲು ದ್ರವ ಸಂಗ್ರಹಿಸುವ ಮೊಬೈಲ್ ವಾಹನಗಳು ನಿಲ್ಲುತ್ತವೆ.
ಕೆಮ್ಮು, ನೆಗಡಿ, ಜ್ವರ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿತ ಖಾಯಿಲೆ, ರಕ್ತದೊತ್ತಡ (ಬಿಪಿ) ಮತ್ತು 60 ವರ್ಷ ಮೇಲ್ಪಟ್ಟವರು ಪರೀಕ್ಷೆಗೆ ಒಳಪಡಬೇಕು. ಈ ಖಾಯಿಲೆಗಳು ಇರುವವರಿಗೆ ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲು ಹಾಗೂ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಉಪ್ಪಿನಬೆಟಗೇರಿ ಹಾಗೂ ನರೇಂದ್ರ ಗ್ರಾಮಗಳಿಗೆ ಮತ್ತು ಹುಬ್ಬಳ್ಳಿಯ ಗೋಕುಲ ರಸ್ತೆ ಹಾಗೂ ಟೆಂಡರ್ ಶ್ಯೂರ್ (ವಿದ್ಯಾನಗರ) ರಸ್ತೆಗಳಿಗೆ ಸ್ವ್ಯಾಬ್ ಕಲೆಕ್ಷನ್ ಮಾಡುವ ಮೊಬೈಲ್ ವಾಹನಗಳು ತೆರಳಿ, ಬೆಳಿಗ್ಗೆ 11 ಗಂಟೆಯಿಂದ ಸಂಜೆ 4.30 ರವರೆಗೆ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ನಿಲ್ಲುತ್ತವೆ. ಅಲ್ಲಿನ ನಿವಾಸಿಗಳು ಸಹ ಸ್ವಯಂ ಪ್ರೇರಣೆಯಿಂದ ಬಂದು ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟವರಲ್ಲಿ ಶೇ.70 ರಷ್ಟು ಸಾವುಗಳು ಹೈ ಡಯಾಬಿಟಿಸ್, ಹೃದಯ ಸಂಬಂಧಿ ಖಾಯಿಲೆ ಕಾರಣಗಳಿಂದಲೇ ಆಗಿವೆ. ಹಾಗಾಗಿ ಸಕ್ಕರೆ ಖಾಯಿಲೆ ಇರುವವರು ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಮತ್ತು ಹೃದಯ ಸಂಬಂಧಿತ ತೊಂದರೆ ಇರುವವರು ಜಾಗೃತಿ ವಹಿಸಬೇಕು. ಅನಗತ್ಯವಾಗಿ ಹೊರಗೆ ಓಡಾಡದೆ, ಮನೆಯಲ್ಲಿದ್ದು ವಿಶ್ರಾಂತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.