ಧಾರವಾಡ: ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ನಿವಾಸಕ್ಕೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಬಿ.ಪಾಟೀಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
![MB Patil visit Vinay Kulkarni residence news](https://etvbharatimages.akamaized.net/etvbharat/prod-images/kn-dwd-6-mb-patil-visit-av-ka10001_20112020175200_2011f_1605874920_886.jpg)
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಸಿಬಿಐ ಬಂಧನ ಹಿನ್ನೆಲೆ ಈಗ ಸಂಕಷ್ಟ ಬಂದಿದೆ. ಈ ಬಂಧನ ರಾಜಕೀಯ ಪ್ರೇರಿತವಾಗಿರುವಂತಹದು. ಕೇಸ್ ಸಿಬಿಐಗೆ ಕೊಡುವ ವಿಷಯ ಕೋರ್ಟ್ನಲ್ಲಿ ವಜಾ ಆಗಿತ್ತು. ಅಲ್ಲಿ ವಜಾ ಆಗಿರುವುದನ್ನು ರೀ ಒಪನ್ ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಅಧಿಕಾರ ಶಾಶ್ವತ ಅಲ್ಲ. ದ್ವೇಷದ ರಾಜಕಾರಣದಿಂದ ಈ ರೀತಿ ಮಾಡಿದ್ದಾರೆ. ಇದರಲ್ಲಿ ಕಾನೂನು ಸಮರ ಆಗುತ್ತದೆ. ಇದರಲ್ಲಿ ನನ್ನದೇನು ಇಲ್ಲ ಅಂತಾ ವಿನಯ್ ನನಗೆ ಬಹಳ ಸಲ ಹೇಳಿದ್ದಾರೆ. ನಿರಪರಾಧಿಯಾಗಿ ಹೊರಗೆ ಬರುತ್ತಾರೆ. ಹೊರಗೆ ಬಂದ ಮೇಲೆ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಾರೆ ಎಂದರು. ಬಿಜೆಪಿಯವರು ಸಿಬಿಐನಂತಹ ತನಿಖಾ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪಕ್ಷ ಮತ್ತು ಸ್ನೇಹಿತರು ಎಲ್ಲರೂ ಸೇರಿ ಎದುರಿಸುತ್ತೇವೆ. ವಿನಯ್ ಜೊತೆಗೆ ನಾವೆಲ್ಲರೂ ಇದ್ದೇವೆ ಎಂದರು.