ಹುಬ್ಬಳ್ಳಿ: ಹಣದಾಸೆಗಾಗಿ ಹುಟ್ಟು ಕುರುಡನನ್ನು ಸ್ನೇಹಿತನೇ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜಗದೀಶ ಪರಮೇಶ್ವರ ಶಿರಗುಪ್ಪಿ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿಯ 1ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
2015 ಮೇ 22 ರಂದು ನಡೆದಿದ್ದ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಿರಾದಾರ ದೇವೆಂದ್ರಪ್ಪ.ಎನ್ ಈ ಆದೇಶ ನೀಡಿದ್ದಾರೆ. ಸರಕಾರಿ ಅಭಿಯೋಜಕರಾದ ಗಿರಿಜಾ ತಮ್ಮಿನಾಳ ಸಂತ್ರಸ್ತರ ಪರ ವಾದ ಮಂಡಿಸಿದ್ದರು.
ಏನಿದು ಪ್ರಕರಣ?:
ಜಗದೀಶ್ ಶಿರಗುಪ್ಪಿ ಹುಟ್ಟು ಕುರುಡನಾಗಿದ್ದು, ಈತನಿಗೆ ದುಡಿಮೆ ಮಾಡುವ ಕೆಲಸಕ್ಕೆ ಅರಿಯರ್ಸ್ ಆಗಿ 1.50 ಲಕ್ಷ ರೂ ಬಂದಿತ್ತು. ಅದನ್ನು ತನ್ನ ಸ್ನೇಹಿತನಿಗೆ ಕೊಡುವ ಉದ್ದೇಶದಿಂದ ಮತ್ತೋರ್ವ ಗೆಳೆಯನಾಗಿದ್ದ ಆರೋಪಿ ಬಸವರಾಜ ಜಿಗಳೂರುನನ್ನು ಜೊತೆಗೆ ಕರೆದುಕೊಂಡು ಗದುಗಿನ ಕಾರ್ಪೋರೇಷನ್ ಬ್ಯಾಂಕ್ ಹೋಗಿ ಹಣವನ್ನು ಡ್ರಾ ಮಾಡಿ ಹುಬ್ಬಳ್ಳಿಗೆ ಬಂದಿದ್ದಾರೆ. ಆಗ ಹಣದ ಆಸೆಗೆ ಬಸವರಾಜ ಜಿಗಳೂರು ಜಗದೀಶ್ ಶಿರಗುಪ್ಪಿ ಅವರನ್ನು ಉಣಕಲ್ ಸಿದ್ದಪ್ಪಜ್ಜನ ಗುಡಿಯ ಹಿಂಭಾಗದಲ್ಲಿ ಉಣಕಲ್ ಕೆರೆ ಕೋಡಿಯ ಹತ್ತಿರ ಕರೆದುಕೊಂಡು ಹೋಗಿ 2015 ಮೇ.23 ರಾತ್ರಿ 8 ರಿಂದ 8.30ರ ಅವಧಿಯಲ್ಲಿ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದನು. ಬಳಿಕ ಆತನ ಬಳಿಯಿದ್ದ 1.40 ಲಕ್ಷ ರೂ. ಹಣ ದೋಚಿಕೊಂಡು ಹೋಗಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿತನ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸವರಾಜ ಜಿಗಳೂರು ಮಾಡಿದ ಕೊಲೆ ಪ್ರಕರಣ ಸಾಬೀತಾಗಿದ್ದು ಅಪರಾಧಿಗೆ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ ದಂಡ ವಿಧಿಸಿದೆ.