ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದ ಬಹು ದಿನಗಳ ಕನಸಾಗಿರುವ ಕಳಸಾ-ಬಂಡೂರಿ ಹೋರಾಟ ಮತ್ತೆ ಜೀವ ಪಡೆದಿದೆ. ಕಾಮಗಾರಿ ಪುನಾರಂಭಕ್ಕೆ ಕಳಸಾ-ಬಂಡೂರಿ ಹೋರಾಟ ಸಮಿತಿ ಆಗ್ರಹಿಸಿದೆ.
ಮಲಪ್ರಭೆಗೆ ಮಹದಾಯಿ ನೀರು ಹರಿಸುವ ಕಳಸಾ-ಬಂಡೂರಿ ತಿರುವು ಯೋಜನೆಯ ಕಾಮಗಾರಿ ಪುನಾರಂಭಿಸಲು ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ನ್ಯಾಯಾಧಿಕರಣವು ತೀರ್ಪು ನೀಡಿ 13.5 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಿದೆ. ಅದರಂತೆ ಈ ಹಿಂದಿನ ಸರ್ಕಾರಗಳು ಕಾಮಗಾರಿಗೆ ಹಣ ಕಾಯ್ದಿರಿಸಲಾಗಿದೆ ಎಂದು ಹೇಳಿವೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದು ಅಗತ್ಯ ತಾಂತ್ರಿಕ ಸಮಸ್ಯೆ ಸರಿಪಡಿಸಬೇಕು. ಕೂಡಲೇ ಕಾಮಗಾರಿ ಪ್ರಾರಂಭಿಸಲು ಮುಂದಾಗಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ.
ಮಹದಾಯಿ ನೀರು ತಂದೇ ತರುತ್ತೇವೆಂದು ರಕ್ತದಲ್ಲಿ ಪತ್ರ ಬರೆದು ಕೊಟ್ಟ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾರೆ. ಶಂಕರ ಪಾಟೀಲ್ ಮುನೇನಕೊಪ್ಪ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಯಾವುದೇ ನೆಪ ಹೇಳದೇ ವಿಳಂಬ ಮಾಡದೇ ಈ ಅಧಿವೇಶನದಲ್ಲಿ ಕಾಮಗಾರಿ ಪ್ರಾರಂಭಿಸಲು ತೀರ್ಮಾನ ಮಾಡಬೇಕು.
ಈ ಭಾಗದ ಜನತೆಯ ಬಹುದಿನಗಳ ಬೇಡಿಕೆ ಸಾಕಾರಗೊಳಿಸಬೇಕು. ಸೂಕ್ತ ತೀರ್ಮಾನಕ್ಕೆ ಬರದೇ ಇದ್ದರೆ ರೈತರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಸಮಿತಿ ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಖಡಕ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:ಕೃಷಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವಾಪಸ್