ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಶರವೇಗದಲ್ಲಿ ಬೆಳೆಯುತ್ತಿದೆ. ಅಲ್ಲದೇ ಈ ಭಾಗದವರೇ ಸಿಎಂ ಆಗಿರುವುದರಿಂದ ಈ ಬಾರಿಯ ಬಜೆಟ್ ಮೇಲೆ ಜನರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ದಿನೇ ದಿನೇ ಶರವೇಗದಲ್ಲಿ ಬೆಳೆಯುತ್ತಿರುವ ವಾಣಿಜ್ಯನಗರಿಯಲ್ಲಿ ವಾಹನ ಹಾಗೂ ಜನದಟ್ಟಣೆಯೂ ವಿಪರೀತವಾಗಿ ಏರಿಕೆಯಾಗುತ್ತಿದೆ. ಇದರ ಪರಿಣಾಮ ನಿತ್ಯ ಜನರು ಟ್ರಾಫಿಕ್ ಕಿರಿಕಿರಿ, ಪಾರ್ಕಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ. ಇಕ್ಕಟ್ಟಾದ ರಸ್ತೆಗಳನ್ನು 9 ಮೀಟರ್ನಿಂದ 12 ಮೀಟರ್ವರೆಗೆ ವಿಸ್ತರಿಸಲು ಅವಕಾಶವಿದೆ. ಆದರೆ, ಇದಿಷ್ಟೇ ಮಾಡಿದರೆ ಸಾಲುವುದಿಲ್ಲ. ಮುಂದಿನ 50 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುವ ಅವಶ್ಯಕತೆಯಿದೆ. ಹಾಗಿದ್ದರೆ ಮೂಲಭೂತ ಸೌಕರ್ಯಗಳ ಸಮಸ್ಯೆ ಈ ಬಜೆಟ್ನಲ್ಲಿ ಬಗೆಹರಿಯಲಿದೆಯೇ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆದರೆ ಇದಕ್ಕೆ ಸಿಎಂ ಮಾತ್ರ ಕಾದು ನೋಡಬೇಕು ಎಂದಿದ್ದಾರೆ.
ವೇಗದಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ಹುಬ್ಬಳ್ಳಿಯೂ ಒಂದು. ಸಾರ್ವನಿಕರ ಸಮಸ್ಯೆ ನಿವಾರಣೆ ಮಾಡುವುದರ ಜತೆಗೆ ಅದಕ್ಕೆ ಪೂರಕವಾಗಿ ನಗರದ ರಸ್ತೆಗಳ ಅಗಲೀಕರಣವಾಗಬೇಕಿದೆ. ರಸ್ತೆಗಳು ಅಗಲವಾಗಬೇಕಾದರೆ, ಇದಕ್ಕೊಂದು ಮಾಸ್ಟರ್ ಪ್ಲಾನ್ ಅತ್ಯಗತ್ಯವಾಗಿದೆ. ಈಗಾಗಲೇ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಸಿಡಿಪಿ, ಸಿಟಿ ಡೆವಲಪ್ಮೆಂಟ್ ಪ್ರಾಜೆಕ್ಟ್ ತಯಾರಿಸುತ್ತಿದೆ. ಇದರಲ್ಲಿ ಮಾಸ್ಟರ್ ಪ್ಲಾನ್ ಪ್ರಸ್ತಾಪವಿಲ್ಲ.
ಇದನ್ನೂ ಓದಿ: ಕಾಂಗ್ರೆಸ್ಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ: ಸಂಸದ ಪ್ರತಾಪ್ ಸಿಂಹ ವಾಗ್ದಾಳಿ
ಒಟ್ಟಿನಲ್ಲಿ ಹುಬ್ಬಳ್ಳಿಯವರೇ ಸಿಎಂ ಆಗಿದ್ದು, ಯಾವ ಸಮಸ್ಯೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇಲ್ಲಿನ ಜನರ ಆಶಾಭಾವನೆಗೆ ಸ್ಪಂದನೆ ಸಿಗಲಿದೆಯಾ ಎಂಬುದೇ ನಮ್ಮ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ.