ಹುಬ್ಬಳ್ಳಿ: ವಿದ್ಯುತ್ ಸ್ಪರ್ಶದಿಂದ ಗಾಯಗೊಂಡು ನರಳಾಡುತ್ತಿದ್ದ ಹದ್ದಿಗೆ ಪೊಲೀಸ್ ಪೇದೆಯೊಬ್ಬರು ನೀರು ಕುಡಿಸಿ ಆರೈಕೆ ಮಾಡಿದ ಘಟನೆ ಅಂಬೇಡ್ಕರ್ ಸರ್ಕಲ್ ಬಳಿ ನಡೆದಿದೆ.
ವಿದ್ಯುತ್ ಸ್ಪರ್ಶಿಸಿ ಬಳಲಿದ ಹಕ್ಕಿಗೆ ಮುತ್ತು ಮೆಣಸಿನಕಾಯಿ ಎಂಬ ಪೊಲೀಸ್ ಪೇದೆ ಮಾನವೀಯತೆ ತೋರಿದ್ದಾರೆ. ಇಂದು ಬೆಳಗ್ಗೆ ವಿದ್ಯುತ್ ಕಂಬದ ಮೇಲೆ ಕುಳಿತಾಗ ಹದ್ದಿಗೆ ವಿದ್ಯುತ್ ಶಾಕ್ ಹೊಡೆದಿದೆ. ಇದರಿಂದ ಹದ್ದು ಅಸ್ವಸ್ಥಗೊಂಡು ಕೆಳಗೆ ಬಿದ್ದಿದೆ. ಆಗ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಮುತ್ತು ನೀರು ಕುಡಿಸಿ ಆರೈಕೆ ಮಾಡಿದ್ರು.
ಇದೇ ವೇಳೆ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನಾ ಸುದ್ದಿಗೆ ತೆರಳಿದ ಮಾಧ್ಯಮದವರು ಕೂಡ ಹದ್ದಿಗೆ ಚಿಕಿತ್ಸೆ ಕೊಡಿಸಲು ಧಾವಿಸಿದರು. ಖಾಸಗಿ ವಾಹಿನಿ ಕ್ಯಾಮರಾಮನ್ ಈಶ್ವರ ಮನಗುಂಡಿ, ವಿನಾಯಕ ರೆಡ್ಡಿ, ಮಹಾಂತೇಶ ಕಂಬಳಿ ಅವರು ಹದ್ದಿಗೆ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದು, ಪ್ರಶಂಸೆಗೆ ಪಾತ್ರವಾಗಿದೆ.