ಹುಬ್ಬಳ್ಳಿ: ಲಾಕ್ಡೌನ್ ವೇಳೆ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಪಾಲಿಕೆ ಮಾಜಿ ಸದಸ್ಯರೊಬ್ಬರು ಡಿಸಿಪಿಗೆ ಆವಾಜ್ ಹಾಕಿದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಸೀಟ್ ಬೆಲ್ಟ್ ಹಾಕದ್ದನ್ನ ಪ್ರಶ್ನಿಸಿದ ಡಿಸಿಪಿಗೆ ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ ಆವಾಜ್ ಹಾಕಿದ್ದಾರೆ.
ನಗರದ ಚೆನ್ನಮ್ಮ ವೃತ್ತದಲ್ಲಿ ತಮ್ಮ ಕಾರು ಚಾಲಕನೊಂದಿಗೆ ಆಗಮಿಸಿದ್ದ ರಾಜಣ್ಣ ಕೊರವಿ ಸೀಟ್ ಬೆಲ್ಟ್ ಹಾಕದಿರುವ ಹಿನ್ನೆಲೆಯಲ್ಲಿ ಡಿಸಿಪಿ ಸೀಟ್ ಬೆಲ್ಟ್ ಯಾಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ ಡಿಸಿಪಿ ಜೊತೆಗೆ ರಾಜಣ್ಣ ಕೊರವಿ ವಾಗ್ವಾದಕ್ಕಿಳಿದಿದ್ದಾರೆ.
ನಾನು ಮಾಜಿ ಕಾರ್ಪೋರೇಟರ್. ನಾನ್ಯಾರು ಅಂತಾ ಪರಿಚಯ ಮಾಡಿಕೊಳ್ಳಬೇಕಲ್ಲ ಎಂದು ಆವಾಜ್ ಹಾಕಿದ್ದಾರೆ. ಆಗ ಡಿಸಿಪಿ ನಮಗೆ ಯಾರಾದರೇನು ಎಂದಿದ್ದಾರೆ. ಅಷ್ಟಕ್ಕೆ ರಾಜಣ್ಣ ಕೊರವಿ ಹಾಗೂ ಅವರ ಕಾರು ಚಾಲಕ ಡಿಸಿಪಿ ಜೊತೆ ಮಾತಿನ ಚಕಮಕಿ ನಡೆಸಿದರು. ಕೊನೆಗೆ ಸೀಟ್ ಬೆಲ್ಟ್ ಹಾಕದ ರಾಜಣ್ಣ ಕೊರವಿಗೆ ದಂಡ ಕಟ್ಟುವಂತೆ ಸೂಚನೆ ನೀಡಿದರು. ನಿಯಮಗಳನ್ನು ಉಲ್ಲಂಘಿಸಿದ ರಾಜಣ್ಣ ಕೊರವಿ ಕೊನೆಗೆ 500 ರೂ. ದಂಡ ಕಟ್ಟಿ ತೆರಳಿದರು. ರಾಜಣ್ಣ ಕೊರವಿ ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಪಿ ರಾಮರಾಜನ್, ಇದು ಪೊಲೀಸರಿಗೆ ಕಾಮನ್. ಜನಸಾಮಾನ್ಯರು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿಯುತ್ತಾರೆ. ಆದ್ರೆ ನಾವು ಕಾನೂನು ಪ್ರಕಾರ ತಪ್ಪು ಮಾಡಿದವರಿಗೆ ದಂಡ ವಿಧಿಸುವ ಕೆಲಸ ಮಾಡುತ್ತೇವೆ. ಯಾವುದೇ ರಾಜಕೀಯ ವ್ಯಕ್ತಿ, ಸಾಮಾನ್ಯ ವ್ಯಕ್ತಿ ಆದ್ರೂ ಕಾನೂನಿನ ಮುಂದೆ ಒಂದೇ ಎಂದರು.