ಹುಬ್ಬಳ್ಳಿ: ರೈತ ಎಂಬ ಕಾರಣಕ್ಕೆ ಎಲ್ಲೂ ಹೆಣ್ಣು ಸಿಗದಿದ್ದಕ್ಕೆ ಅಸಮಾಧಾನಗೊಂಡ ಯುವ ರೈತ ಸಮುದಾಯ ತಹಶೀಲ್ದಾರರ ಬಳಿ ತಮ್ಮ ಅಳಲು ತೋಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ದೇಶದ ಬೆನ್ನೆಲುಬು ಅಂತಾರೆ. ಆದರೆ ಅದೇ ರೈತನಿಗೆ ಮದುವೆಯಾಗಲು ಹೆಣ್ಣು ಸಿಗುವುದೇ ಕಷ್ಟಕರ. ರೈತರ ಮನೆಯಲ್ಲಿ ಕೆಲಸ ಹೆಚ್ಚಿರುತ್ತದೆ ಹಾಗೂ ದುಡಿಮೆ ಸಹ ಜವರಾಯನ ಜೂಜಾಟದಂತೆ ಅಂತ ಹೆಣ್ಣು ಹೆತ್ತವರು ರೈತರಿಗೆ ತಮ್ಮ ಮಗಳನ್ನು ಕೊಡಲು ಹಿಂದೆ ಮುಂದೆ ನೋಡ್ತಾರೆ. ಇದರಿಂದ ಮದುವೆಯಾಗಲು ಹೆಣ್ಣು ಸಿಗದೆ ನೊಂದಿದ್ದ ಯುವ ರೈತರು ತಹಶೀಲ್ದಾರರ ಗ್ರಾಮ ವಾಸ್ತವ್ಯದ ವೇಳೆಯಲ್ಲಿ ಮನವಿ ಪತ್ರ ಕೊಟ್ಟಿದ್ದಾರೆ. ಈ ಮನವಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ರೈತರಿಗೆ ಕನ್ಯೆ ನೀಡುವಂತೆ ಜನಜಾಗೃತಿ ಕಾರ್ಯಕ್ರಮ ಮಾಡಿ: ಹೊಸಳ್ಳಿ ಗ್ರಾಮದಲ್ಲಿ ನಡೆದ ತಹಶೀಲ್ದಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ರೈತರು 'ದೇಶಕ್ಕೆ ಅನ್ನ ನೀಡಲು ರೈತ ಬೇಕು. ಆದರೆ ಆತನಿಗೆ ಕನ್ಯೆ ನೀಡಲು ಜನ ಹಿಂದೇಟು ಹಾಕಿ ನೌಕರಿ ಇದೆಯಾ ಅಂತಾರೆ. ಹಾಗಿದ್ದರೆ ರೈತರು ಮಕ್ಕಳು ರೈತರಾಗಬಾರದೇ. ಈ ಬಗ್ಗೆ ಸರ್ಕಾರ ಗಮನ ಹರಿಸಿ ರೈತರಿಗೆ ಕನ್ಯೆ ನೀಡುವಂತೆ ಜನಜಾಗೃತಿ ಕಾರ್ಯಕ್ರಮ ಮಾಡಿ' ಅರಿವು ಮೂಡಿಸುವಂತೆ ಕುಂದಗೋಳ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ತಹಶೀಲ್ದಾರರ ಗ್ರಾಮ ವಾಸ್ತವ್ಯ ಆಯಾ ಗ್ರಾ.ಪಂ ಸಂಬಂಧಪಟ್ಟ ವರದಿ ಒಪ್ಪಿಸಲು ಮಾತ್ರ ಸೀಮಿತ ಎಂಬಂತಿತ್ತೇ ವಿನಃ ಅವಶ್ಯಕ ಅಭಿವೃದ್ಧಿ ಚರ್ಚೆ ದೂರವಾಗಿತ್ತು.
ಇದನ್ನೂ ಓದಿ: 75ನೇ ವಯಸ್ಸಿಗೆ ಎರಡನೇ ವಿವಾಹ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮಾಜಿ ಮೇಯರ್