ಹುಬ್ಬಳ್ಳಿ: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ನೇತ್ರದಾನಿಗಳು ಹಾಗೂ ನೇತ್ರಶಸ್ತ್ರ ಚಿಕಿತ್ಸೆಯ ಮೇಲೂ ಕೆಂಗಣ್ಣು ಬೀರಿದೆ. ಕೊರೊನಾದಿಂದ ಕಣ್ಣುಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳು ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳಿಗೆ ಅಡಚಣೆಯನ್ನುಂಟು ಮಾಡಿದೆ. ನಿತ್ಯ ಕಣ್ಣಿಗೆ ಸಂಬಂಧಿತ ಹಲವಾರು ಶಸ್ತ್ರ ಚಿಕಿತ್ಸೆಗಳು ನೇತ್ರದಾನಕ್ಕೆ ನೋಂದಣಿಗಳು ನಡೆಯುತ್ತಿದ್ದವು. ಆದ್ರೆ ಕೊರೊನಾ ಮಹಾಮಾರಿಯಿಂದ ಕಾರ್ನಿಯಲ್ ಕಸಿಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ.
ಹೌದು. ಉತ್ತರ ಕರ್ನಾಟಕ ಭಾಗದ ಪ್ರಖ್ಯಾತ ಎಂ.ಎಂ ಜೋಶಿ ನೇತ್ರ ಚಿಕಿತ್ಸಾ ಕೇಂದ್ರ ಕಳೆದ ವರ್ಷ 375 ಕಾರ್ನಿಯಲ್ ಕಸಿ ಮಾಡಿತ್ತು. ಆದ್ರೆ ಪ್ರಸಕ್ತ ವರ್ಷ ಗಣನೀಯ ಇಳಿಕೆಯಾಗಿದೆ. ಲಾಕ್ ಡೌನ್ ನಂತರ ದಿನಗಳಾದ ಏಪ್ರಿಲ್ ನಿಂದ ಅಗಸ್ಟ್ ವರಗೆ ಕೇವಲ 11 ಕಾರ್ನಿಯಲ್ ಕಸಿ ಪಡೆದುಕೊಳ್ಳಲಾಗಿದೆ.
ಕಾರ್ನಿಯಲ್ ಕಸಿ ಗಣನೀಯವಾಗಿ ಕಡಿಮೆಯಾಗಲು ಕೋವಿಡ್ ಮಾರ್ಗಸೂಚಿಗಳು ಕಾರಣ ಎಂದು ಎಂ.ಎಂ ಜೋಶಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಶ್ರೀನಿವಾಸ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ನಮ್ಮ ಆಸ್ಪತ್ರೆ ಕಟ್ಟು ನಿಕಟ್ಟಾಗಿ ಪಾಲನೆ ಮಾಡುತ್ತಿದೆ. ಹೇಗೇ ಬೇಕೋ ಹಾಗೆ ಕಾರ್ನಿಯಲ್ ಸಂಗ್ರಹ ಸಾಧ್ಯವಾಗುತ್ತಿಲ್ಲ. ದೊಡ್ಡ ಆಸ್ಪತ್ರೆಗಳು ಕೋವಿಡ್ ಆಸ್ಪತ್ರೆಗಳಾಗಿವೆ. ಯಾವುದೇ ಕಾಯಿಲೆಯಿಂದ ಮೃತಪಟ್ಟವರ ಕಾರ್ನಿಯಲ್ ಪಡೆಯಲು ಕೋವಿಡ್ ಪರೀಕ್ಷೆ ನಡೆಸಬೇಕು. ಕೋವಿಡ್ ಇಲ್ಲದವರು ಎಂದು ಖಚಿತವಾದ ಮೇಲೆ ಕಾರ್ನಿಯಲ್ ಪಡೆಯಲಾಗುತ್ತಿದೆ. ಹೀಗಾಗಿ ಒಂದು ಕಾರ್ನಿಯಲ್ ಪಡೆಯಲು ಎರಡು ದಿನ ಕಾಯಬೇಕಿದೆ. ಅದರ ಜೊತೆಗೆ ಜನರಲ್ಲಿ ಇನ್ನು ಭಯದ ವಾತಾವರಣವಿದೆ. ಹೀಗಾಗಿ ಕಾರ್ಮಿಯಲ್ ಕಸಿ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಕಣ್ಣಿಗೆ ಸಂಬಂಧಿಸಿದಂತೆ ಶೇ. 50-60 ಜನರು ಆಸ್ಪತ್ರೆಗೆ ಬರುವ ಸಂಖ್ಯೆ ಕಡಿಮೆಯಾಗಿದೆ. ಅತೀ ಗಂಭೀರವಾದ ಕೇಸ್ ಗಳಿಗೆ ಮಾತ್ರ ಚಿಕಿತ್ಸೆ ನಡೆಸಲಾಗುತ್ತಿದೆ. ಕೊರೊನಾ ಭಯದಿಂದ ನೇತ್ರದಾನ ಮಾಡುವವರ ಸಂಖ್ಯೆಯು ಕಡಿಮೆಯಾಗುತ್ತಿದೆ. ಕೊರೊನಾದಿಂದ ನೂರಾರು ಜನರ ಕಣ್ಣುಗಳು ಮಣ್ಣು ಪಾಲಾಗುತ್ತಿದೆ. ನೇತ್ರದಾನದ ನೋಂದಣಿ ಮಾಡಿದವರ ಕಣ್ಣುಗಳು ಮರಣಾನಂತರ ಜಗತ್ತನ್ನು ನೋಡುವ ಬದಲು ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿವೆ ಎಂದರು.
ಕೊರೊನಾ ಸೋಂಕಿನ ಭೀತಿಯಿಂದ ನೋಂದಣಿ ಮಾಡಿಕೊಂಡ ವ್ಯಕ್ತಿ ಮೃತನಾದರೂ, ಕಣ್ಣುಗಳನ್ನು ಪಡೆಯಲು ವೈದ್ಯರು ಸಮಸ್ಯೆ ಎದುರಿಸುವಂತಾಗಿದೆ. ಸ್ವಾಭಾವಿಕವಾಗಿ ಕಾಯಿಲೆಯಿಂದ ಅಥವಾ ಅಪಘಾತದಿಂದ ಮೃತರಾದರೂ ಅವರಲ್ಲಿ ಕೊರೊನಾ ಸೋಂಕು ಇರಬಹುದು ಎಂಬ ಆತಂಕ ಕಾಡುತ್ತಿದೆ. ಆದರೆ ಜನರು ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಿಕೊಂಡು ಅಮೂಲ್ಯವಾದ ಕಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ. ಬೇರೆಯವರ ಬಾಳು ಬೆಳಗಬೇಕಿದ್ದ ಕಣ್ಣುಗಳು ಮಣ್ಣಾಗುತ್ತಿರುವುದಕ್ಕೆ ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ.