ಧಾರವಾಡ: ಇಂದು ನಾಡಿನಾದ್ಯಂತ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಎಲ್ಲೆಡೆ ಕನ್ನಡದ ಡಿಂಡಿಮ ಬಾರಿಸುತ್ತಿದೆ. ಧಾರವಾಡದಲ್ಲೋರ್ವ ತಾನು ಕರ್ತವ್ಯ ನಿರ್ವಹಿಸುವ ಬಸ್ಗೆ ಸಿಂಗರಿಸುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ.
ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರು ಗ್ರಾಮದ ಕೆಎಸ್ಆರ್ಟಿಸಿ ನೌಕರೊಬ್ಬರು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ದಿನದಂದು ಬಸ್ಗೆ ಅಲಂಕರಿಸಿ ಇಡೀ ದಿನ ಕನ್ನಡ ಹಾಡುಗಳನ್ನು ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಾರೆ. ಶಿರೂರು ಗ್ರಾಮದ ಮಲ್ಲಿಕಾರ್ಜುನ ಒಗೆಣ್ಣವರ ಗ್ರಾಮಸ್ಥರೊಂದಿಗೆ ಸೇರಿಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಬಸ್ಗೆ ಸಿಂಗಾರ ಮಾಡುತ್ತಾರೆ. ಸುಮಾರು ಹತ್ತು ವರ್ಷಕ್ಕೂ ಅಧಿಕ ಕಾಲ ಕೆಎಸ್ಆರ್ಟಿಸಿ ನೌಕರರಾಗಿ ಕೆಲಸ ಮಾಡುತ್ತಿರುವ ಇವರು ಪ್ರತಿವರ್ಷ ಬಸ್ಗೆ ಅಲಂಕಾರ ಮಾಡಿ, ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬಸ್ನಲ್ಲಿ ಕನ್ನಡದ ಹಿರಿಯ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ವಿವಿಧ ಮಹನೀಯರ ಭಾವಚಿತ್ರ ಹಾಕಿ ಹೂವಿನಿಂದ ಸಿಂಗರಿಸುತ್ತಾರೆ. ಇವರ ಕನ್ನಡ ಪ್ರೇಮಕ್ಕೆ ಸಾರಿಗೆ ನೌಕರ ವಲಯ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.