ಧಾರವಾಡ : ಕೊರೊನಾ ವೈದ್ಯಕೀಯ ಉಪಕರಣ ಅವ್ಯವಹಾರ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿ, ಅವ್ಯವಹಾರ ಆಗಿಲ್ಲ, ದುಪ್ಪಟ್ಟು ಹಣ ಆಗಿದೆ ಅಂತಾ ಸಹಕಾರ ಸಚಿವರು ಹೇಳಿದ್ದಾರೆ. ಹಾಗಂದ್ರೇ ಅದರ ಅರ್ಥ ಏನು, ಅವ್ಯವಹಾರ ಆಗಿದೆ ಅಂತಾನೇ ಆಗುತ್ತದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸರಿಯಾದ ರೀತಿ ನಿರ್ವಹಣೆ ಮಾಡುತ್ತಿಲ್ಲ. ಸಿಎಂ ಒಬ್ಬರನ್ನು ಬಿಟ್ರೆ ಉಳಿದವರು ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಕೊರೊನಾ ವಿಚಾರದಲ್ಲಿ ಸರಿಯಾದ ರೀತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಸರ್ಕಾರ ಕೈ ಬಿಟ್ಟು ಬಹಳ ದಿನ ಆಗಿದೆ. ಅದಕ್ಕೆ ರಾಮುಲು ಈಗ ದೇವರೇ ಕಾಪಾಡಬೇಕು ಅಂತಾ ಹೇಳಿರಬಹುದು. ಕೊರೊನಾ ವಿಷಯದಲ್ಲಿ ಸರ್ಕಾರ ಯಾವ ರೀತಿ ಇರಬೇಕು ಆ ರೀತಿ ಇಲ್ಲ. ಮಹಾರಾಷ್ಟ್ರದಲ್ಲಿ ಸಾಕಷ್ಟು ಟೀಕೆಗಳಿದ್ದವು. ಆದರೆ, ಅಲ್ಲಿನ ಸರ್ಕಾರ ಈಗ ಸುಧಾರಿಸಿದೆ. ಒಂದಿಬ್ಬರು ಸಚಿವರನ್ನು ಬಿಟ್ಟರೇ ಉಳಿದವರೆಲ್ಲ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಯಾವ ಸಚಿವರಲ್ಲಿಯೂ ಇಚ್ಛಾಶಕ್ತಿ ಕಾಣುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.