ಹುಬ್ಬಳ್ಳಿ: ಭಾರತ ವಿಕಾಸ ಪರಿಷತ್ನ ಸಿದ್ದಾರೂಢ ಶಾಖೆ ಹಾಗೂ ಮಜೇಥಿಯಾ ಫೌಂಡೇಶನ್ ಸಹಯೋಗದಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವನ್ನು ಅಗಸ್ಟ್ 11 ಮತ್ತು ಸೆಪ್ಟೆಂಬರ್ 29 ರಂದು ಮೂರುಸಾವಿರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಜುನಾಥ ಭಟ್ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2 ಹಂತಗಳಲ್ಲಿ ಜರುಗುವ ಶಿಬಿರವನ್ನು ಭಾರತ ವಿಕಾಸ ಪರಿಷತ್ ವಿಕಲಾಂಗ ಕೇಂದ್ರ ಹಾಗೂ ಹೈದರಾಬಾದ್ನ ನುರಿತ ತಜ್ಞರು ನಡೆಸಿಕೊಡಲಿದ್ದಾರೆ ಎಂದರು. ಮೊದಲ ಹಂತದಲ್ಲಿ ನೋಂದಣಿ ಮತ್ತು ನುರಿತ ತಜ್ಞರಿಂದ ವಿಕಲ ಚೇತನರ ತಪಾಸಣೆ-ಕೃತಕ ಕೈಕಾಲು ಅಳತೆಯನ್ನು ಪಡೆಯಲಾಗುವುದು.
ಎರಡನೆಯ ಹಂತದಲ್ಲಿ ಸೆಪ್ಟಂಬರ್ 29ರಂದು ನಡೆಯುವ ಸರಳ ಸಮಾರಂಭದಲ್ಲಿ ಫಲಾನುಭವಿಗಳಿಗೆ ಕೃತಕ ಕೈ-ಕಾಲುಗಳನ್ನು ಜೋಡಿಸಿ ಉಪಯೋಗಿಸುವ ಬಗೆಗೆ ತರಬೇತಿ ನೀಡಲಾಗುವುದು ಎಂದು ಮಜೇಥಿಯಾ ಪೌಂಢೇಶನ್ ಮುಖಂಡರು ತಿಳಿಸಿದರು.
ಹಿಂದೆ ನಮ್ಮ ಕಡೆಯಿಂದ ಕೃತಕ ಕಾಲುಗಳನ್ನು ಜೋಡಣೆ ಮಾಡಿಕೊಂಡಿರುವ ನೂರಾರು ಯುವಕರು, ವೃದ್ದರು ಎಲ್ಲರೂ ತಮ್ಮ ಸ್ವಂತ ಉದ್ಯೋಗಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಯಾರಿಗೆ ಇದರ ಅವಶ್ಯಕತೆ ಇದೆಯೋ ಅವರು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಯೋಗೇಶ ಶಾನಭಾಗ್, ಶೋಭಾ, ಅಮರೇಶ ಹಿಪ್ಪರಗಿ, ನಂದೀಶ ಕಾಶಪ್ಪ ಮಜೇಥಿಯ ಇತರರು ಉಪಸ್ಥಿತರಿದ್ದರು.