ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನನ್ನ ಬರ್ಬರವಾಗಿ ಕೊಲೆ ಮಾಡಿದ್ದ ಆರು ಜನ ಆರೋಪಿಗಳನ್ನ ಘಟನೆ ನಡೆದ 24 ಗಂಟೆಗಳಲ್ಲಿಯೇ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಲೋಕೇಶ ಕಡೆಮನಿ (18) ಎನ್ನುವ ಯುವಕನನ್ನು ಸಾಗರ ಸುಭಾಷ ದಾಬಡೆ (20), ಸಿದ್ದೇಶ ಶಂಕ್ರಪ್ಪ ಜೋಳದಡಗಿ (20), ಕಿರಣ ಲಕ್ಷ್ಮಣ ಹೊನ್ನಳ್ಳಿ (22), ರಜತ್ ಪಾಂಡುರಂಗ್ ನಾಯ್ಕ (18), ಸೋಯಬ್ ಇಲಿಯಾಸ್ಅಹ್ಮದ ಖಾಜಾಪೂರ(19), ಮಂಜುನಾಥ ಕೃಷ್ಣಾ ರೆಡ್ಡಿ (22) ಸೇರಿ ಹಳೇ ದ್ವೇಷದಿಂದ ದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದ ಹಿಂದೆ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಮೃತನ ತಂದೆ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿಸಿಕೊಂಡ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.
ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ತನಿಖಾಧಿಕಾರಿಗಳ ತಂಡ ರಚನೆ ಮಾಡಿ, ವಿಶೇಷ ಕಾರ್ಯಾಚರಣೆ ಮೂಲಕ ಆರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.