ಹುಬ್ಬಳ್ಳಿ: ಆರು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣದ 12 ಆರೋಪಿಗಳು ಅಪರಾಧಿಗಳೆಂದು ಸಾಬೀತಾಗಿದ್ದು, ನಗರದ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ಡಿಸೆಂಬರ್ 30ಕ್ಕೆ ತೀರ್ಪು ಕಾಯ್ದಿರಿಸಿದೆ.
ಬಾನಿ ಓಣಿಯ ನಿವಾಸಿಗಳಾದ ಕಲ್ಲಪ್ಪ ಶಿರಕೋಳ, ಸಿದ್ಧಾರೂಢ ಶಿರಕೋಳ, ಅಯ್ಯಪ್ಪ ಶಿರಕೋಳ, ನಿಂಗಪ್ಪ ಶಿಂಧೆ, ಅಯ್ಯಪ್ಪ ಲಕ್ಕುಂಡಿ, ಮಂಜುನಾಥ ಉಪ್ಪಾರ, ಶ್ರೀಪಾದ ಪೂಜಾರಿ, ಮಂಟೂರ ರಸ್ತೆಯ ವಿಶಾಲ ಜಾಧವ, ಗಣೇಶ ಪೇಟೆಯ ಅಜಯ ಗುತ್ತಲ, ಮಂಜುನಾಥ ಗೋಕಾಕ, ಸಂತೋಷ ಸುನಾಯಿ, ತಬೀಬ ಲ್ಯಾಂಡ್ನ ಅನೀಲ ಸಾವಂತ ಅಪರಾಧಿಗಳಾಗಿದ್ದಾರೆ.
2013ರ ಜೂನ್ 16ರಂದು ನೆಹರೂ ಮೈದಾನದಲ್ಲಿ ಕ್ರಿಕೆಟ್ ಆಡುವಾಗ ಗಲಾಟೆಯಾಗಿ, ಯಲ್ಲಾಪುರ ಓಣಿಯ ನಜೀರ್ ಮುದಗಲ್ ಎಂಬ ವ್ಯಕ್ತಿಗೆ ಚಿಟಗುಪ್ಪಿ ವೃತ್ತದಲ್ಲಿ ಚಾಕು ಇರಿದಿದ್ದರು. ಕಿಮ್ಸ್ಗೆ ದಾಖಲಾಗಿದ್ದ ನಜೀರ್ ನಾಲ್ಕು ದಿನಗಳ ನಂತರ ಮೃತ ಪಟ್ಟಿದ್ದ. ಈ ಕುರಿತಾಗಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಧೀಶ ಕೆ.ಎನ್. ಗಂಗಾಧರ ಅವರು ವಿಚಾರಣೆ ನಡೆಸಿ, ಸರ್ಕಾರಿ ಅಭಿಯೋಜಕ ಡಿ.ಎ. ಭಾಂಡೇಕರ್ ವಾದ ಮಂಡಿಸಿದ್ದರು.