ಹುಬ್ಬಳ್ಳಿ: ಮುಂದುವರೆದ ಸಾರಿಗೆ ಮುಷ್ಕರದ ಹಿನ್ನೆಲೆ ಇಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಸಂಜೆಯವರೆಗೆ 26 ಬಸ್ಸುಗಳು ಸಂಚರಿಸಿವೆ.
ಹುಬ್ಬಳ್ಳಿ ಗ್ರಾಮಾಂತರ 1ನೇ ಡಿಪೋದಿಂದ 11 ಬಸ್ಸುಗಳು, ಗ್ರಾಮಾಂತರ 2ನೇ ಡಿಪೋದಿಂದ 10, ಗ್ರಾಮಾಂತರ 3ನೇ ಡಿಪೋದಿಂದ 3, ಕಲಘಟಗಿ ಮತ್ತು ನವಲಗುಂದ ಡಿಪೋದಿಂದ ತಲಾ ಒಂದೊಂದು ಬಸ್ ಸಂಚರಿಸಿವೆ.
ಈ ಬಸ್ಸುಗಳನ್ನು ಬಳಸಿಕೊಂಡು ಹುಬ್ಬಳ್ಳಿಯಿಂದ ಗದಗಕ್ಕೆ 26 ಸರತಿ, ಬೆಳಗಾವಿಗೆ 4, ಬಾಗಲಕೋಟೆಗೆ 6, ಕಲಘಟಗಿಗೆ 6, ಮತ್ತಿತರೆ ಸ್ಥಳಗಳಿಗೆ 8 ಸರತಿ ಕಾರ್ಯಾಚರಣೆ ಮಾಡಲಾಗಿದೆ. ನಲಗುಂದದಿಂದ ರೋಣಕ್ಕೆ ಒಂದು ಹಾಗೂ ಕಲಘಟಗಿಯಿಂದ ಹುಬ್ಬಳ್ಳಿಗೆ ಎರಡು ಸರತಿಗಳಲ್ಲಿ ಕಾರ್ಯಾಚರಣೆ ಮಾಡಲಾಗಿದೆ ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ.
17 ಸಾರಿಗೆ ಸಿಬ್ಬಂದಿ ವರ್ಗಾವಣೆ:
ಹುಬ್ಬಳ್ಳಿ ಗ್ರಾಮಾಂತರ ವಿಭಾಗದ 17 ಸಿಬ್ಬಂದಿಯನ್ನು ಆಡಳಿತಾತ್ಮಕ ಕಾರಣಗಳ ಮೇಲೆ ಬೇರೆ ಬೇರೆ ವಿಭಾಗಗಳಿಗೆ ವರ್ಗಾಯಿಸಲಾಗಿದೆ. ಅವರ ಪೈಕಿ ಚಿಕ್ಕೋಡಿ ವಿಭಾಗಕ್ಕೆ 6 ಸಿಬ್ಬಂದಿ, ಬೆಳಗಾವಿ ವಿಭಾಗಕ್ಕೆ 4, ಶಿರಸಿ ವಿಭಾಗಕ್ಕೆ 4 ಮತ್ತು ಹಾವೇರಿ ವಿಭಾಗಕ್ಕೆ 3 ಸಿಬ್ಬಂದಿಯನ್ನು ವರ್ಗಾಯಿಸಲಾಗಿದೆ.
ಬಸ್ ಡಿಪೋಗಳತ್ತ ಬರುತ್ತಿರುವ ಸಿಬ್ಬಂದಿ:
ಮುಷ್ಕರದ ಆರಂಭದ ದಿನದಿಂದ ಸಿಬ್ಬಂದಿಯು ಬಸ್ ಡಿಪೋಗಳತ್ತ ಸುಳಿದಿರಲಿಲ್ಲ. ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಮೇಲಾಧಿಕಾರಿಗಳ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಇದೀಗ ಪರಿಸ್ಥಿತಿ ಬದಲಾಗಿದೆ. ಎಲ್ಲಾ ಡಿಪೋಗಳ ಬಹಳಷ್ಟು ಸಿಬ್ಬಂದಿ ತಾವಾಗಿಯೇ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಕರ್ತವ್ಯಕ್ಕೆ ಬರವುದಾಗಿ ತಿಳಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ರಸ್ತೆಗಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೆಚ್.ರಾಮನಗೌಡರ ತಿಳಿಸಿದ್ದಾರೆ.
ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ - ದೂರು ದಾಖಲು:
ಮುಷ್ಕರದ ಅವಧಿಯಲ್ಲಿ ಕರ್ತವ್ಯನಿರತ ಸಾರಿಗೆ ಸಿಬ್ಬಂದಿಯ ಕೆಲಸಕ್ಕೆ ಅಡ್ಡಿಪಡಿಸಿದ ಘಟನೆಗಳು ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿ ಹಾಗೂ ನವಲಗುಂದ ಬಸ್ ನಿಲ್ದಾಣದಲ್ಲಿ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ದಾಖಲಿಸಲಾಗಿದೆ ಎಂದು ರಾಮನಗೌಡರ ತಿಳಿಸಿದ್ದಾರೆ.
ಗುರುವಾರ ಹುಬ್ಬಳ್ಳಿ ಗ್ರಾಮಾಂತರ 2ನೇ ಡಿಪೋದ ಕೆಎ 42 ಎಫ್ 1501ಸಂಖ್ಯೆಯ ಬಸ್ಸು ಡಿಪೋದಿಂದ ಹಳೇ ಬಸ್ ನಿಲ್ದಾಣಕ್ಕೆ ಹೋಗುವಾಗ ಸಿಬ್ಬಂದಿ ವಸತಿ ಗೃಹಗಳ ಹತ್ತಿರ ಕೆಲವರು ಸ್ವಲ್ಪ ಹೊತ್ತು ಬಸ್ ತಡೆದು ಅಡ್ಡಿಪಡಿಸಿದ ಘಟನೆ ನಡೆದಿತ್ತು. ಇನ್ನೊಂದು ಘಟನೆಯಲ್ಲಿ ಭಾನುವಾರ ಗ್ರಾಮಾಂತರ ವಿಭಾಗದ ಗ್ರಾಮಾಂತರ 1ನೇ ಘಟಕ ಕೆ.ಎ. 63 ಎಫ್ ಎಫ್ 171 ಬಸ್ಸು ಹುಬ್ಬಳ್ಳಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದಾಗ ನವಲಗುಂದ ಬಸ್ ನಿಲ್ದಾಣದಲ್ಲಿ ಶಿವಾನಂದ ಎಂಬುವವರು ಬಸ್ ಚಾಲಕರ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದಿಸಿ, ಬಸ್ನ ಕೀಯನ್ನು ಕಿತ್ತುಕೊಂಡು ಹೋಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಹಾಸನದಲ್ಲಿ 45 ಸಾರಿಗೆ ನೌಕರರ ವರ್ಗಾವಣೆ: ಬೀದಿಗಿಳಿದು ಕುಟುಂಬಸ್ಥರ ಪ್ರತಿಭಟನೆ
ಎರಡೂ ಘಟನೆಗಳಿಗೆ ಸಂಬಂಧಪಟ್ಟಂತೆ ಹುಬ್ಬಳ್ಳಿ ಗೋಕುಲ ರಸ್ತೆ ಪೊಲೀಸ್ ಠಾಣೆ ಮತ್ತು ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.