ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಳಂಕ ತರುವ ಕೆಲಸವನ್ನು ಈ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಹೇಳಿದರು.
ನಗರದಲ್ಲಿ ಏರ್ಪಡಿಸಿದ್ದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನದ ಮಹತ್ವ ಏನು ಎಂಬ ಬಗ್ಗೆ ನನಗೂ ಅರಿವಿದೆ. ನಾನು ವರ್ಗಾವಣೆಯಲ್ಲಿ ದಂಧೆಯಲ್ಲಿ ತೊಡಗಿದ್ದೇನೆ. ಆಡಳಿತದಲ್ಲಿ ಮೂಗು ತೂರಿಸುತ್ತೇನೆ ಎಂಬೆಲ್ಲಾ ಆರೋಪಗಳನ್ನ ಮಾಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟನೆ ನೀಡಿದರು.
ಯಡಿಯೂರಪ್ಪನವರು 40 ವರ್ಷ ಹೋರಾಟ ಮಾಡಿ ಸಿಎಂ ಸ್ಥಾನಕ್ಕೇರಿದವರು. ಜ್ಯೋತಿಷಿಗಳಿಂದ ಸಿಎಂ ಆದವರಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 3 ತಿಂಗಳು ಕಳೆದಿಲ್ಲ. ಆಗಲೇ ಕೆಲ ದಿನಗಳಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಸಿ ಬೇರೆಯವರನ್ನು ನಿಯೋಜಿಸಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಸೂರ್ಯ-ಚಂದ್ರ ಇರುವುದೆಷ್ಟೋ ಸತ್ಯವೋ ಅಷ್ಟೇ ಯಡಿಯೂರಪ್ಪನವರು ಮೂರುವರೆ ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರೀಯ ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ನಾಯಕತ್ವ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೂ, 76 ವರ್ಷ ವಯಸ್ಸಿನ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ವಾ? 74 ನೇ ವಯಸ್ಸಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಿಯೋಜಿಸಲಿಲ್ವಾ ಎಂದು ಪ್ರಶ್ನಿಸಿದರು. ಪಕ್ಷದ ಕಾರ್ಯಕರ್ತರ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾರ ಆಶೀರ್ವಾದ ಇರುವವರೆಗೂ ಯಡಿಯೂರಪ್ಪನವರನ್ನ ಯಾರೂ ಏನೂ ಮಾಡಲಾಗುವುದಿಲ್ಲ ಎಂದರು.