ದಾವಣಗೆರೆ: ದಿನಸಿ ಕಿಟ್ ಪಡೆಯಲು ಜನರು ಮುಗಿಬಿದ್ದ ಘಟನೆ ಜಗಳೂರು ಪಟ್ಟಣದಲ್ಲಿ ನಡೆದಿದ್ದು, ಜನರ ನೂಕುನುಗ್ಗಲು ತಡೆಯಲು ಪೊಲೀಸರು ಹೈರಾಣಾದರು.
ಶಾಸಕ ಎಸ್.ವಿ. ರಾಮಚಂದ್ರಪ್ಪ ಹಾಗೂ ಸಂಸದ ಜಿ. ಎಂ. ಸಿದ್ದೇಶ್ವರ್ ಅವರು ನೇತೃತ್ವದಲ್ಲಿ ಒಂದು ಸಾವಿರ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಆಯೋಜಿಸಿದ್ದರು. ಕಿಟ್ ಪಡೆಯಲು ಗೇಟ್ ತಳ್ಳಿ ಒಳ ನುಗ್ಗಿದ ಮಹಿಳೆಯರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹೈರಾಣಾದರು.
ಕಲ್ಯಾಣ ಮಂಟಪದ ಒಳ- ಹೊರಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಲ್ಲ. ಜನಪ್ರತಿನಿಧಿಗಳು ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಹೇಳಿದ್ದರು ಜನರು ಮಾತ್ರ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಜಗಳೂರು ತಾಲೂಕಿನ ವಿವಿಧೆಡೆಯಿಂದ ಬಂದಿದ್ದ ನೂರಾರು ಜನರು ಕಿಟ್ ಪಡೆಯಲು ಮುಗಿಬಿದ್ದರು.