ದಾವಣಗೆರೆ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸ್ವಾಮೀಜಿಗಳು ಭಕ್ತರ ಮನೆಗೆ ತೆರಳಿ ಶ್ರಾವಣ ಭಿಕ್ಷೆ, ದವಸ ಧಾನ್ಯ ಕೇಳುವುದು ವಾಡಿಕೆ. ಆದರೆ ಜಿಲ್ಲೆಯ ಶ್ರೀ ಬಸವಪ್ರಭು ಸ್ವಾಮೀಜಿಗಳು ಜನರಲ್ಲಿರುವ ದುಶ್ಚಟಗಳ ದುರಾಲೋಚನೆಯನ್ನು ದೂರ ಮಾಡಲು ಜೋಳಿಗೆ ಹಿಡಿದು ಮನೆ ಮನೆಗೆ ಹೋಗಿ ಮದ್ಯದ ಬಾಟಲಿ, ಬೀಡಿ, ಗುಟ್ಕಾ ಕೇಳುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಮಠಕ್ಕೋ, ಶಾಲೆಗೋ ದೇಣಿಗೆ ಕೊಡಿ ಎಂದು ಮನೆ ಮನೆ ಸುತ್ತುತ್ತಿಲ್ಲ. ಭಿಕ್ಷೆ ಬೇಡಿ ಲೋಕ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ. ಈ ಸ್ವಾಮೀಜಿಗಳು ಮನೆ ಮನೆ ಸುತ್ತಿ ಮದ್ಯದ ಬಾಟಲ್, ಗುಟ್ಕಾ ಚೀಟಿ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ಜೋಳಿಗೆಯಲ್ಲಿ ಹಾಕಿಸಿಕೊಳ್ಳುತ್ತಾರೆ. ಈ ಮೂಲಕ ಜನರಲ್ಲಿನ ದುಶ್ಚಟ ಮತ್ತು ದುರಾಲೋಚನೆಯನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ, ಕೊಲೆ, ಸುಲಿಗೆಯಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದಕ್ಕಾಗಿ ಶ್ರೀಗಳು ಕಳೆದ 11 ವರ್ಷದಿಂದ ಪ್ರತಿ ಶ್ರಾವಣದಲ್ಲಿ ಈ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ.
ಸ್ವಾಮೀಜಿಗಳು ಜೋಳಿಗೆಗೆ ಮಾದಕ ವಸ್ತುಗಳನ್ನು ಹಾಕಿಸಿಕೊಂಡು ವ್ಯಸನಿಗೆ ರುದ್ರಾಕ್ಷಿ ಕಟ್ಟಿ ಆತ್ಮಲಿಂಗದ ಮೇಲೆ ಪ್ರಮಾಣ ಮಾಡಿಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಜನರಲ್ಲಿ ಜಾಗೃತಿ ಮೂಡುತ್ತದೆ. ಅದರಲ್ಲೂ ಶ್ರಾವಣದಲ್ಲಿ ಜನ ಭಕ್ತಿ ಭಾವದಿಂದ ಇರ್ತಾರೆ. ಮನವೊಲಿಸಿದರೆ ದುಶ್ಚಟ ಕೈಬಿಟ್ಟು ಮುಂದೆ ಒಳ್ಳೆಯ ಜೀವನ ನಡೆಸುತ್ತಾರೆ ಎಂಬುದು ಶ್ರೀಗಳ ನಂಬಿಕೆಯಾಗಿದೆ.
ಮನೆ ಮನೆಗೆ ತೆರಳುವ ಸ್ವಾಮೀಜಿ:
ನಗರದ ಬೂದಾಳದ ರಸ್ತೆಯಲ್ಲಿ ಜೋಳಿಗೆ ಹಿಡಿದು ಮನೆ ಮನೆಗೆ ತಿರುಗಿದ ಬಸವಪ್ರಭು ಶ್ರೀಗಳು, ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡುವ ಕೆಲಸ ಮಾಡುತ್ತಾರೆ. ಪ್ರತಿ ವರ್ಷ ಶ್ರಾವಣದಲ್ಲಿ ಜಯದೇವ ಜೋಳಿಗೆ ಎಂಬ ವಿನೂತನ ಕಾರ್ಯಕ್ರಮ ಮಾಡುವ ಮೂಲಕ ಸಾಕಷ್ಟು ಮಂದಿಗೆ ಮದ್ಯಪಾನ ಸೇರಿದಂತೆ ಇತರೆ ಚಟಗಳನ್ನು ಬಿಡಿಸಿದ್ದಾರೆ.